ಹನುಮಸಾಗರ: ಹನುಮಸಾಗರದಲ್ಲಿ 56 ಜನರಿಗೆ ಆನೆಕಾಲು ರೋಗ ತಗುಲಿರುವ ಲಕ್ಷಣ ಕಂಡು ಬಂದಿದೆ ಎಂದು ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಶಿವಶಂಕರ ವೈ.ಚನ್ನಿ ಹೇಳಿದರು.
ಮಂಗಳವಾರ ರಾತ್ರಿ ಇಲ್ಲಿನ ವಿವಿಧ ಭಾಗಗಳಲ್ಲಿ ಆರೋಗ್ಯ ಇಲಾಖೆಯಿಂದ ಆನೆಕಾಲು ರೋಗ ಪತ್ತೆಗಾಗಿ ಸಾರ್ವಜನಿಕರಿಂದ ರಕ್ತದ ಮಾದರಿಗಳನ್ನು ಪಡೆದರು. ನಿರ್ದಿಷ್ಟ ಸೊಳ್ಳೆಗಳು ಕಚ್ಚಿದಾಗ ಮಾತ್ರ ಫೈಲೇರಿಯಾ ಬರುವ ಸಾಧ್ಯತೆ ಇರುತ್ತದೆ, ಆನೆಕಾಲು ರೋಗದ ಬಗ್ಗೆ ಜನರಲ್ಲಿ ಆತಂಕ ಬೇಡ ಎಂದರು.
ಜಿಲ್ಲೆಯ 13 ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿದ್ದು ಕುಷ್ಟಗಿ ತಾಲ್ಲೂಕಿನಲ್ಲಿ ಹನುಮಸಾಗರ, ನೀರಲಕೊಪ್ಪ, ಹೂಲಗೇರಾ, ಕುಷ್ಟಗಿ, ತಾವರಗೇರಾ, ಹಿರೇಮನ್ನಾಪೂರ, ಸಾಸ್ವಿಹಾಳ ಗ್ರಾಮಗಳಲ್ಲಿ ಸಮೀಕ್ಷೆ ಕಾರ್ಯ ನಡೆದಿದೆ ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿನಯಕುಮಾರ ಮಾಹಿತಿ ನೀಡಿ, ಆರಮಭದ ಸಮಯದಲ್ಲಿ ಆನೆಕಾಲು ರೋಗದ ಸೋಂಕು ತಗುಲಿದಾಗ ಜ್ವರ ಮತ್ತು ತಲೆ ನೋವು ಬಿಟ್ಟರೆ ಬೇರೆ ಯಾವುದೆ ಚಿಹ್ನೆಯು ಹೊರಗೆ ಕಾಣುವುದಿಲ್ಲ. ಸೋಂಕು ತೀವ್ರವಾದಾಗ ಹಠಾತ್ತನೆ ತೀವ್ರ ಜ್ವರ, ತಲೆ ನೋವು, ಬಿಗಿದ ಕತ್ತು, ಗೊಂದಲ, ಕೋಮಾ, ಸ್ನಾಯು ಸೆಳೆತದಂತಹ ಲಕ್ಷಣಗಳು ಕಂಡು ಬರುತ್ತವೆ ಎಂದು ಹೇಳಿದರು.
ತಾಲ್ಲೂಕು ಮಲೇರಿಯಾ ರೋಗ ನಿಯಂತ್ರಣದ ಮೇಲ್ವಿಚಾರಕ ಪ್ರಕಾಶ ಗುತ್ತೇದಾರ ಮಾಹಿತಿ ನೀಡಿ, ಸಾರ್ವಜನಿಕರು ಮಲಗುವಾಗ ಸೊಳ್ಳೆ ಪರದೆ ಬಳಸಿ, ಹೊರಗೆ ತೋರುವ ಚರ್ಮಕ್ಕೆ ಸೊಳ್ಳೆ ನಿವಾರಕಗಳನ್ನು ಲೇಪಿಸಿಕೊಂಡರೆ ರೋಗ ನಿಂತ್ರಣ ಮಾಡಬಹುದು ಎಂದರು.
ಬೆಂಗಳೂರಿನ ಪ್ರಯೋಗಾಲಯದ ತಜ್ಞರು 550 ಜನರ ರಕ್ತದ ಮಾದರಿಗಳನ್ನು ಪಡೆದುಕೊಂಡರು.