ಬೀದರ್: ಲಾಲಪ್ಪ ಕುದರೆ ಚಾರಿಟಬಲ್ ಅಂಡ್ ಎಜುಕೇಶನ್ ಟ್ರಸ್ಟ್ ವತಿಯಿಂದ ನಗರದ ಕುದರೆ ಫಂಕ್ಷನ್ ಹಾಲ್ನಲ್ಲಿ ಮಾರ್ಚ್ 12 ರಂದು ಉಚಿತ ಸರಳ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಶಂಭುಲಿಂಗ ಕುದರೆ ತಿಳಿಸಿದರು.
ಸಾಮೂಹಿಕ ವಿವಾಹದಲ್ಲಿ ಬಡವರ ಕನಿಷ್ಠ 21 ಜೋಡಿಗಳ ವಿವಾಹ ನೆರವೇರಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಜಿಲ್ಲೆಯ 100 ಜೋಡಿಗಳು ಬಂದರೂ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವಕಾಶ ಮಾಡಿಕೊಡಲಾಗುವುದು ಎಂದು ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.
ಬಹುತೇಕ ಬಡು ಜನರು ಸಾಲ ಮಾಡಿ ಮದುವೆ ಸಮಾರಂಭ ಮಾಡುತ್ತಾರೆ. ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ತಪ್ಪಿಸಲು ಬಡ ಜನರ ಅನುಕೂಲಕ್ಕಾಗಿ ಈ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಎಲ್ಲ ಸಮುದಾಯಗಳ ವಿವಾಹ ನಡೆಸಲಾಗುವುದು. ಯಾವ ಸಮುದಾಯಗಳ ಜೋಡಿಗಳು ಹೆಸರು ನೋಂದಾಯಿಸಿಕೊಳ್ಳುತ್ತವೆಯೂ ಆಯಾ ಸಮುದಾಯದ ಮಠಾಧೀಶರ ಸಮ್ಮುಖದಲ್ಲಿಯೇ ವಿವಾಹ ನಡೆಸಲಾಗುವುದು. ಹಸೆಮಣೆ ಏರಲಿರುವ ನವ ಜೋಡಿಗಳು ಸ್ವಂತ ಖರ್ಚಿನಲ್ಲಿ ತಾಳಿ, ಕಾಲುಂಗರ, ಬಾಸಿಂಗದೊಂದಿಗೆ ಸಿದ್ಧತೆ ಮಾಡಿಕೊಂಡು ಸಮಾರಂಭಕ್ಕೆ ಬರಬೇಕು. ವಧು ಮತ್ತು ವರನ ಕಡೆಯ 100 ಜನ ಸಂಬಂಧಿಕರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
ಸಾಮೂಹಿಕ ವಿವಾಹದಲ್ಲಿ ಮದುವೆ ಆಗುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜೋಡಿಗಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ₹ 50 ಸಾವಿರ ಸಹಾಯಧನ ಒದಗಿಸಿಕೊಡಲಾಗುವುದು ಎಂದು ತಿಳಿಸಿದರು.
ವಧು, ವರರು ಅರ್ಜಿಯೊಂದಿಗೆ ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್, ಎಸ್ಸೆಸ್ಸೆಲ್ಸಿ ಅಂಕ ಪಟ್ಟಿ, ಜನ್ಮದಿನಾಂಕ ಪತ್ರ, ವಿಳಾಸ ವಿವರ ನೀಡಬೇಕು. ದಾಖಲೆ ಪರಿಶೀಲಿಸಿದ ನಂತರ ಸಾಮೂಹಿಕ ಸಮಾರಂಭದಲ್ಲಿ ಮದುವೆಗೆ ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಈ ದಾಖಲೆಗಳೊಂದಿಗೆ ಮಾರ್ಚ್ 5ರ ಒಳಗೆ ಮೊಬೈಲ್ ಸಂಖ್ಯೆ 9060128047/ 94490 18297/ 9448118297 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಟ್ರಸ್ಟ್ನ ಕಾರ್ಯದರ್ಶಿ ಜಯಶ್ರೀ ಕುದರೆ, ನಿರ್ದೇಶಕ ಶಿವರಾಜ ಕುದರೆ, ಖಜಾಂಚಿ ಅಶ್ವಿನಿ ಕುದರೆ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.