ವಿಜಯಪುರ: ಯುವಕರಿಗೆ ಕೌಶಲ ಆಧಾರಿತ ವೃತ್ತಿ ತರಬೇತಿ ನೀಡಿದರೆ ಗ್ರಾಮೀಣ ಭಾಗದ ಯುವಕರು ನಗರದತ್ತ ವಲಸೆ ಹೋಗುವುದನ್ನು ತಡೆಗಟ್ಟಬಹುದು. ದೇಶದ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಬಹುದು ಎಂದು ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕ ಡಾ. ಬಿ.ಎಸ್. ಜನಗೌಡರ ಹೇಳಿದರು.
ನಗರದ ಹೊರವಲಯದ ಪ್ರಾದೇಶಿಕ ಕೃಷಿ ವಿಜ್ಞಾನ ಕೇಂದ್ರದಲ್ಲಿ ಈಚೆಗೆ ನಡೆದ ‘ಗ್ರಾಮೀಣ ವೃತ್ತಿಪರ ತರಬೇತಿಯಿಂದ ರೈತರ ಆರ್ಥಿಕ ಸಬಲೀಕರಣ’ ಎಂಬ ವಿಷಯ ಕುರಿತ 10 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನವದೆಹಲಿಯ ಸಸ್ಯ ತಳಿ ರಕ್ಷಣೆ ಮತ್ತು ರೈತರ ಹಕ್ಕುಗಳ ಪ್ರಾಧಿಕಾರದ ಚೇರಮನ್ ಡಾ.ಆರ್.ಆರ್.ಹಂಚಿನಾಳ ಮಾತನಾಡಿ, ರೈತರ ಅವಶ್ಯಕತೆಗಳೇ ರೈತರನ್ನು ಕೃಷಿ ಆಧಾರಿತ ಉದ್ಯಮಿ ಗಳನ್ನಾಗಿ ರೂಪಿಸುತ್ತಿವೆ, ಕೃಷಿ ವಲಯ ಈಗಲೂ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದರು.
ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ಡಾ.ವಿ.ಐ.ಬೆಣಗಿ ಮಾತ ನಾಡಿ, ಬರುವ 2020ನೇ ಸಾಲಿಗೆ ದೇಶಕ್ಕೆ 342 ಮಿಲಿಯನ್ ಟನ್ ಆಹಾರ ಅವಶ್ಯಕತೆ ಇದೆ. ಆದ್ದರಿಂದ ಹವಾಮಾನ ಬದಲಾವಣೆಯ ದಿನಗಳಲ್ಲಿ ಕೌಶಲ ಆಧಾರಿತ ತರಬೇತಿಯಿಂದ ಬೆಳೆಯಲ್ಲಿ ಇಳುವರಿ ಮತ್ತು ಗುಣಮಟ್ಟವನ್ನು ಹೆಚ್ಚಿಸಬಹುದು ಎಂದು ಹೇಳಿದರು.
ಡಾ.ಎಂ.ಜೆ.ಚಂದ್ರೇಗೌಡ, ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎನ್. ಕೆ.ಬಿರಾದಾರ ಪಾಟೀಲ ಹಾಗೂ ಕಾರ್ಯಕ್ರಮ ಸಂಯೋಜ ನಾಧಿಕಾರಿ ಡಾ.ಎಸ್.ವೈ.ವಾಲಿ ಮಾತನಾಡಿದರು.
ಈ ಕಾರ್ಯಾಗಾರದಲ್ಲಿ 20 ಜನ ವಿಜ್ಞಾನಿಗಳಿಗೆ ಸಾವಯವ ಕೃಷಿ, ಸಮಗ್ರ ಕೃಷಿ, ಕೋಳಿ ಸಾಕಾಣಿಕೆ, ನರ್ಸರಿ ನಿರ್ವಹಣೆ, ಸಾವಯವ ಬೆಲ್ಲ ತಯಾರಿಕೆ, ಅಂಗಾಂಶ ಕೃಷಿ, ಜೈವಿಕ ಶಿಲೀಂಧ್ರ ನಾಶಕಗಳ ಉತ್ಪಾದನೆ ಹಾಗೂ ಜೋಳದ ಅವಲಕ್ಕಿ ತಯಾರಿಕೆ ಕುರಿತು ಮಾಹಿತಿ ನೀಡಲಾಯಿತು.
ದೇಶದ ವಿವಿಧ ರಾಜ್ಯದ 20 ಜನ ಕೃಷಿ ವಿಜ್ಞಾನಿಗಳು ಭಾಗವಹಿಸಿದ್ದರು. ಸಹ ಸಂಶೋಧನಾ ನಿರ್ದೇಶಕ ಡಾ. ಎಸ್. ಎಸ್. ಗುಳೇದಗುಡ್ಡ, ಡಾ.ಎಸ್. ಎಂ. ವಸ್ತ್ರದ ಇದ್ದರು. ಸಹ ವಿಸ್ತರಣಾ ನಿರ್ದೇಶಕ ಡಾ.ಎಸ್.ಬಿ.ಪಾಟೀಲ ಸ್ವಾಗತಿಸಿದರು. ಡಾ. ಪ್ರೇಮಾ ಬಿ. ಪಾಟೀಲ ವಂದಿಸಿದರು.