ಹೊಸನಗರ: ‘ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರ ಗೆಲುವಿಗೆ ಕಾರಣ ಆಗಿದೆ’ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಕಲಗೋಡು ರತ್ನಾಕರ ಹೇಳಿದರು.
ಎಪಿಎಂಸಿ ಚುನಾವಣೆಯಲ್ಲಿ ವಿಜೇತ ಕಾಂಗ್ರೆಸ್ ಸದಸ್ಯರಿಗೆ ಪಟ್ಟಣದ ಗಾಂಧಿಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
‘ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಕೃಷಿಕರ ಪರ ನಿಲುವು, ಯೋಜನೆಗಳು ನಮ್ಮ ಚುನಾವಣೆಯ ಗೆಲುವಿಗೆ ಪ್ರಮುಖ ಕಾರಣ ಆಗಿವೆ’ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಚಿವ ಕಾಗೋಡು ತಿಮ್ಮಪ್ಪ ಹಾಗೂ ಶಾಸಕ ಕಿಮ್ಮನೆ ರತ್ನಾಕರ ಅವರ ಅಭಿವೃದ್ಧಿ ಕಾರ್ಯಗಳು ಮತಗಳಾಗಿ ಪರಿವರ್ತನೆಯಾಗಿವೆ’ ಎಂದರು.
ಎಪಿಎಂಸಿ ನಿರ್ದೇಶಕರಾದ ಬಂಡಿ ರಾಮಚಂದ್ರ, ಕುನ್ನೂರು ಕುಬೇರಪ್ಪ, ಅಶೋಕ್, ಲೋಕಪ್ಪಗೌಡ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ವಾಸಪ್ಪ ಗೌಡ, ಸದಸ್ಯರಾದ ಚಂದ್ರಮೌಳಿ, ಏರಗಿ ಉಮೇಶ್, ಮುಖಂಡರಾದ ಮಹಾಬಲ ರಾವ್, ರತ್ನಾಕರ ಶೆಟ್ಟಿ, ಎಂ.ಎಂ.ಪರಮೇಶ್, ಕೆ.ಷಣ್ಮುಖಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಯುವ ಕಾಂಗ್ರೆಸ್ ಕಾರ್ಯದರ್ಶಿ ಜಯನಗರ ಗುರು ಸ್ವಾಗತಿಸಿದರು.