ಗಜೇಂದ್ರಗಡ: ಇದು ಆನ್ಲೈನ್ ಯುಗ. ಎಲ್ಲವೂ ಆನ್ಲೈನ್ನಲ್ಲೇ ನಡೆಯುತ್ತದೆ. ಆದರೆ ಪಟ್ಟಣದ ಕಾಯಿಪಲ್ಲೆ ಬೀಜ ಮಾರಾಟಗಾರರೊಬ್ಬರು ದಶಕದ ಹಿಂದೆಯೇ ಆನ್ಲೈನ್ನಲ್ಲಿ ಬೀಜದ ವಹಿವಾಟು ನಡೆಸುತ್ತಿದ್ದರು ಎಂಬುದು ಬಹಳ ಸೋಜಿಗವಾದುದು.
ಪಟ್ಟಣದ ಜೋಡು ರಸ್ತೆಯ ಪೂರ್ವ ಭಾಗದಲ್ಲಿ ಸಣ್ಣ ಅಂಗಡಿ ಹಾಕಿಕೊಂಡು ಬೀಜ ಮಾರಾಟ ಮಾಡುವ ಖಾಜೇಸಾಬ್ ಗೊಡೇಕಾರ ಅವರಿಗೆ ಆನ್ಲೈನ್ ವಹಿವಾಟು ಹೊಸದಲ್ಲ. ಅಪರೂಪದ ಕಾಯಿಪಲ್ಲೆ ಬೀಜಗಳನ್ನು ದೂರದ ಊರುಗಳಿಂದ ಆನ್ಲೈನ್ನಲ್ಲಿ ಕಾಯ್ದಿರಿಸಿ, ತರಿಸಿಕೊಂಡು ವಿವಿಧ ಸಂತೆಗಳಲ್ಲಿ ಮಾರಾಟ ಮಾಡುತ್ತಾ ಬಂದಿದ್ದಾರೆ.
ಖಾಜೇಸಾಬ್ ಮೊದಲು ಹುಬ್ಬಳ್ಳಿಯಲ್ಲಿ ಕಾಯಿಪಲ್ಲೆ ಬೀಜ ಖರೀದಿಸುತ್ತಿದ್ದರು. ಆದರೆ ಕೆಲ ತರಕಾರಿ ಬೀಜಗಳು ಹುಬ್ಬಳ್ಳಿಯಲ್ಲಿ ಸಿಗುತ್ತಿರಲಿಲ್ಲ. ಹೀಗಾಗಿ ಅವರು ಬೇರೆ ಬೇರೆ ಕಂಪೆನಿಗಳ ತರಕಾರಿ ಬೀಜ ಕೊಳ್ಳಲು ಆನ್ಲೈನ್ ಮೊರೆ ಹೋದರು. ದಶಕದಿಂದಲೂ ವಿವಿಧ ಕಂಪೆನಿಗಳೊಂದಿಗೆ ಆನ್ಲೈನ್ನಲ್ಲಿ ವ್ಯವಹರಿಸಿ ಬೀಜ ತರಿಸಿಕೊಳ್ಳುತ್ತಾರೆ. ಈ ಭಾಗದಲ್ಲಿ ಹಲವು ಹೊಸ ಕಾಯಿಪಲ್ಲೆ ಬೀಜವನ್ನು ಪರಿಚಯಿಸಿದ ಕೀರ್ತಿಯೂ ಅವರ ಮೇಲಿದೆ.
‘ಹಲವು ವರ್ಷಗಳಿಂದ ಕಾಯಿಪಲ್ಲೆ ಬೀಜ ವ್ಯಾಪಾರ ಮಾಡುವ ಕಂಪೆನಿಗಳ ಜೊತೆ ವ್ಯವಹಾರ ಮಾಡುತ್ತಿದ್ದೇನೆ. ಅವುಗಳ ಜೊತೆಗೆ ನೇರವಾಗಿ ವ್ಯವಹಾರ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆನ್ಲೈನ್ ಮೊರೆ ಹೋದೆ. ಕಂಪೆನಿಗಳ ಜೊತೆ ಅಪಾರ ವಿಶ್ವಾಸ ಉಳಿಸಿಕೊಂಡಿದ್ದೇನೆ. ಬೀಜ ಕಾಯ್ದಿರಿಸಿದರೆ ಅವರೇ ಕಳುಹಿಸಿಕೊಡುತ್ತಾರೆ. 2–3 ತಿಂಗಳು ಹಣ ಕೇಳುವುದಿಲ್ಲ. ಅಷ್ಟು ನಂಬಿಕೆ ಉಳಿಸಿಕೊಂಡಿದ್ದೇನೆ. ಬೀಜದ ಅವಧಿ ಮೀರಿದ್ದರೆ ಅವುಗಳನ್ನು ವಾಪಸ್ ಕಳಿಸಿದರೆ ಮರಳಿ ತೆಗೆದುಕೊಳ್ಳುತ್ತಾರೆ’ ಎಂದು ಖಾಜೇಸಾಬ್ ಹೇಳಿದರು.
ಬಡತನದ ಕುಟುಂಬ...
ಒಂದು ಕಾಲದಲ್ಲಿ ಬಡತನವನ್ನು ಮೈಗಂಟಿಸಿಕೊಂಡ ಕುಟುಂಬ ಇದು. ಇಂದು ಕಾಯಿಪಲ್ಲೆ ಬೀಜಗಳ ಮಾರಾಟ ಮಾಡುವ ಮೂಲಕ ಸಂಸಾರದ ನೊಗ ಎಳೆಯುತ್ತಿದೆ. ಈ ಕುಟುಂಬ ಎರಡು ತಲೆಮಾರುಗಳಿಂದಲೂ ಕಾಯಿ ಪಲ್ಲೆ ಬೀಜ ಮಾರಾಟ ಮಾಡುತ್ತಾ ಜೀವನ ಕಟ್ಟಿಕೊಂಡಿದೆ.
ಅಜ್ಜ ಇಮಾಂಸಾಬ್ ಅವರು ಮುನ್ಸಿಪಾಲಟಿಯಲ್ಲಿ ಕೆಲಸಗಾರ ಆಗಿದ್ದವರು. ಅವರ ಮಗ ಚಾಂದಸಾಬ್ ಕಿರಾಣಿ ಅಂಗಡಿ, ಹುಣಸೆ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಅದರಲ್ಲಿ ಸಾಕಷ್ಟು ನಷ್ಟ ಅನುಭವಿಸಿದ ನಂತರ ಅಪಾರ ಬಡತನ ಅನುಭವಿಸಬೇಕಾಯಿತು.
ಪತ್ನಿ ಬಡಿತಾಜ್ಬಿ ಇಬ್ಬರು ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳನ್ನು ಬಡತನದಲ್ಲಿಯೇ ಬೆಳೆಸಿದರು. ಚಾಂದಸಾಬ್ ಸಹೋದರ ಹುಸೇನ್ಸಾಬ್ ಅಂದು ಕಾಯಿಪಲ್ಲೆ ಕಮೀಷನ್ ವ್ಯಾಪಾಯಾಗಿದ್ದರು. ಅವರೊಂದಿಗೆ ಗದಗ, ಹುಬ್ಬಳ್ಳಿ ಅಡ್ಡಾಡಿದ ಚಾಂದಸಾಬ್ ಅವರು ವ್ಯವಹಾರವನ್ನು ಕರಗತ ಮಾಡಿಕೊಂಡು 1977ರಲ್ಲಿ ಬೀಜದ ವ್ಯಾಪಾರಕ್ಕೆ ಅಣಿಯಾದರು.
ಆಗ ಪಟ್ಟಣದ ಜನರಿಗೆ ಪಾಲಾಕ್, ಬೀನ್ಸ್ ಬೀಜ ಪರಿಚಯಿಸಿವರೇ ಚಾಂದಸಾಬ್. ಇಬ್ಬರೂ ಹೆಣ್ಣು ಮಕ್ಕಳು ಮದುವೆ ಮಾಡಿಕೊಟ್ಟಿದ್ದಾರೆ. ಖಾಜೇಸಾಬ್ ಬೀಜ ಮಾರಾಟದಲ್ಲಿ ಹೊಸತನ ಸೃಷ್ಟಿಸಿಕೊಂಡಿದ್ದರೆ ಇನ್ನೊಬ್ಬ ಮಗ ಇಮಾಂಸಾಬ್ ಸುದ್ದಿ ವಾಹಿನಿಯೊಂದರಲ್ಲಿ ಜಿಲ್ಲಾ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ.
10ನೇ ವರ್ಗದ ವರೆಗೆ ಓದಿದ ಖಾಜೇಸಾಬ್, ತಂದೆಯೊಂದಿಗೆ ಸಂಚರಿಸಿ ಬೀಜದ ವ್ಯಾಪಾರವನ್ನು ಕರಗತ ಮಾಡಿಕೊಂಡರು. ತಂದೆಯ ಮರಣದ ನಂತರ ಬೀಜ ಮಾರಾಟದ ವೃತ್ತಿ ಅವರ ಕುಟುಂಬಕ್ಕೆ ಆಧಾರವಾಯಿತು. ಚವಳಿ, ಬದನೆ, ಪಾಲಾಕ್, ಹೀರೇಕಾಯಿ, ಬೆಂಡೆ, ಮೂಲಂಗಿ, ಮೆಂತೆ, ಹಾಗಲಕಾಯಿ, ಕೊತ್ತಂಬರಿ ಇತ್ಯಾದಿ ತಹರೇವಾರಿ ಬೀಜಗಳನ್ನು ಮಂಗಳವಾರದಿಂದ ಶನಿವಾರದ ವರೆಗೆ ನಡೆಯುವ ಸಂತೆಗಳಲ್ಲಿ ಮಾರಾಟ ಮಾಡುತ್ತಾರೆ.
ಭಾನುವಾರ ಕುಷ್ಟಗಿ, ಸೋಮವಾರ ಹನುಮಸಾಗರ ಸಂತೆಯಲ್ಲಿ ಅಂಗಡಿ ಹಾಕುತ್ತಾರೆ. ಕಾಯಿಪಲ್ಲೆ ಹಾಕುವ ರೈತರು, ಮನೆಯ ಕೈತೋಟದಲ್ಲಿ ತರಕಾರಿ ಬೆಳೆಯುವವರಿಗೆ ಖಾಜಾಸಾಬ್ ಎಂದರೆ ಬಹಳ ಪರಿಚಿತ ವ್ಯಕ್ತಿ. ಗುಣಮಟ್ಟದ ಜೀಜ ನೀಡುವಲ್ಲಿಯೂ ಅವರು ಹೆಸರುವಾಸಿಯಾಗಿದ್ದಾರೆ.
‘ಈ ವರ್ಷ ಸರಿಯಾಗಿ ಮಳೆ ಬೀಳದ ಕಾರಣ ಬೀಜದ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಬೀಜ ವ್ಯಾಪಾರದೊಂದಿಗೆ ಪರ್ಯಾಯವಾಗಿ ಅಡಿಕೆ, ಚಹಾಪುಡಿ ಇತ್ಯಾದಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದೇನೆ’ ಎಂದು ಖಾಜೇಸಾಬ್ ಹೇಳಿದರು. ಅವರ ಜೊತೆ ಮಾತನಾಡಲು ಮೊ: 9886564153 ಸಂಪರ್ಕಿಸಬಹುದು.
–ಡಾ.ಮಲ್ಲಿಕಾರ್ಜುನ ಕುಂಬಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.