ರಾಮದುರ್ಗ: ಸತತ ಭೀಕರ ಬರಗಾಲದಿಂದ ಕೃಷಿ ಬಿಕ್ಕಟ್ಟಿನಲ್ಲಿದೆ. ರೈತರು ಅಲ್ಪ ಸ್ವಲ್ಪ ಬೆಳೆ ತಗೆದರೂ ಸರಿಯಾದ ಬೆಲೆ ಸಿಗದೆ ಇರುವುದರಿಂದ ರೈತ ಕುಲ ಕಂಗೆಟ್ಟಿದ್ದು, ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಸಾಲಮನ್ನಾ ಹೋರಾಟ ಸಮಿತಿ ನೇತೃತ್ವದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಇಲ್ಲಿನ ವೆಂಕಟೇಶ್ವರ ದೇವಸ್ಥಾನದಿಂದ ಪ್ರತಿಭಟನೆಯಲ್ಲಿ ಹೊರಟ ನೂರಾರು ರೈತರು ಕೇಂದ್ರ ಸರಕಾರಕ್ಕೆ ಸಾಲಮನ್ನಾಗೆ ಒತ್ತಾಯಿಸಿರು. ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸಭೆ ನಡೆಸಿದರು.
ದೇಶದ 15 ರಾಜ್ಯಗಳಲ್ಲಿ ಬರಗಾಲ ಆವರಿಸಿದ್ದರಿಂದ ರೈತರ ಪರಿಸ್ಥಿತಿ ತುಂಬಾ ಶೋಚನಿಯವಾಗಿದೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ರೈತರ ನೆರವಿಗೆ ಬರದೇ ಕೆಲವೇ ಕೆಲವು ಬಂಡವಾಳಶಾಹಿಗಳಿಗೆ ಸುಮಾರು ₹ 3.56 ಲಕ್ಷ ಕೋಟಿ ಸಾಲ ಮನ್ನಾ ಮಾಡಿದೆ ಎಂದು ಆರೊಪಿಸಿದರು.
ಮುಂಬೈಯಿಂದ ಅಹ್ಮದಾಬಾದಿಗೆ ಶ್ರೀಮಂತ ಜನ ಒಡಾಡಲು ಬುಲೆಟ್ ಟ್ರೇನ್ ಓಡಿಸಲಿಕ್ಕೆ ₹ 90 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಆದರೆ ರೈತರ ಬಗ್ಗೆ ಗಮನ ಹರಿಸದೆ ಇರುವುದು ವಿಷಾದನೀಯ ಎಂದು ಆಪಾದಿಸಿದರು.
ಕೇಂದ್ರ ಸರ್ಕಾರದ ನೀತಿಗೆ ಆಕ್ರೋಶ ವ್ಯಕ್ತ ಪಡಿಸಿದ ರೈತ ನಾಯಕರು ಈ ಸಲದ ಬಜೆಟ್ ಮಂಡನೆ ಮಾಡುವಾಗ ಈ ದೇಶಕ್ಕೆ ಅನ್ನ ನೀಡುವ ರೈತರ ಸಾಲ ಮನ್ನಾ ಮಾಡಿ ರೈತರನ್ನು ರಕ್ಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ರೈತ ಮುಖಂಡರಾದ ವಿ.ಪಿ. ಕುಲಕರ್ಣಿ, ಎಸ್.ಬಿ. ಹಳ್ಳಿ, ಎಸ್.ಆರ್. ಮಿರ್ಜಿ, ಅರ್ಜುನ ಜಾಧವ, ಪ್ರವೀಣ ಹನಮನಟ್ಟಿ, ಗೈಬು ಜೈನೆಖಾನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.