ಬಾಳೆಹೊನ್ನೂರು: ಅರಣ್ಯ ಇಲಾಖೆ ನೆಡುತೋಪು ಹಾಗೂ ಮೀಸಲು ಅರಣ್ಯ ದಲ್ಲಿ ಬೆಲೆ ಬಾಳುವ ಸಾವಿರಾರು ಮರ ಗಳನ್ನು ಬುಡ ಸಮೇತ ಕಿತ್ತು ಹಾಕುವು ದನ್ನು ನಿಲ್ಲಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ಸದಸ್ಯರು ಬುಧವಾರ ಅರಣ್ಯ ಇಲಾಖೆಯ ಎಸಿಎಫ್ ಅವರಿಗೆ ಮನವಿ ಸಲ್ಲಿಸಿದವು.
ಜಿಲ್ಲಾ ಬುಡಕಟ್ಟು ಕೃಷಿಕರ ಸಂಘದ ಜ್ಯೋತಿ ವಿಠಲ್ ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲವಿದ್ದು, ಮಲೆನಾಡಿನಲ್ಲೂ ಕುಡಿಯುವ ನೀರಿಗೆ ಬರ ಎದುರಾಗಿದೆ. ಇಂತಹ ಸಮಯದಲ್ಲಿ ಮರಗಳನ್ನು ಕಿತ್ತು ಹಾಕುವುದರಿಂದ ಅಸಮತೋಲನವಾಗಲಿದೆ.
ನೈಸರ್ಗಿಕ ಪ್ರಧೇಶವಾದ ಮಲೆನಾಡಿನಲ್ಲಿ ಈಗಾ ಗಲೇ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಹತ್ತಾರು ಸಾವಿರ ಸಂಖ್ಯೆಯಲ್ಲಿ ಮರಗಳನ್ನು ಕಡಿದಲ್ಲಿ ಮುಂದಿನ ದಿನಗಳಲ್ಲಿ ಬಯಲು ಸೀಮೆಯ ವಾತಾವರಣ ಸೃಷ್ಟಿಯಾಗಲಿದೆ. ಹಸಿರು ಮರಗಳನ್ನು ಕಡಿಯ ಬಾರದು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದೆ. ಆದರೆ ಅರಣ್ಯ ಇಲಾಖೆ ಅದನ್ನು ಮೀರಿ ಬೆಳೆದು ನಿಂತ ಮರಗಳನ್ನು ಕಡಿಯುವ ಮೂಲಕ ಕಾನೂನನ್ನು ಉಲ್ಲಂಘಿಸುತ್ತಿದೆ ಎಂದು ಆಪಾದಿಸಿದರು.
ರಾಜ್ಯ ಸರ್ಕಾರ ಅರಣ್ಯದಲ್ಲಿನ ಬುಡಕಟ್ಟು ನಿವಾಸಿಗಳಿಗಾಗಿ ಅರಣ್ಯ ಹಕ್ಕು ಹಾಗೂ ಸಮುದಾಯದ ಹಕ್ಕನ್ನು ನೀಡಿದೆ. ಆದರೆ ಅರಣ್ಯ ಇಲಾಖೆ ಅವುಗಳನ್ನು ಗಾಳಿಗೆ ತೂರಿ ದೌರ್ಜನ್ಯ ಎಸಗುತ್ತಿದೆ. ಅರಣ್ಯ ಹಕ್ಕು ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಜಾಗ ಮಂಜೂರು ಮಾಡುತ್ತಿಲ್ಲ. ಸಾವಿರಾರು ಮರ ಕಡಿಯುವ ಕೆಲಸ ನಿಲ್ಲಿಸದೆ ಇದೇ ಪರಿಸ್ಥಿತಿ ಮುಂದುವರೆದಲ್ಲಿ ಅರಣ್ಯ ದೊಳಗೆ ಅರಣ್ಯ ಇಲಾಖೆ ಯಾವುದೇ ಕೆಲಸ ಮಾಡಲು ಬಿಡುವುದಿಲ್ಲ.ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆಗಳ ಮನವಿ ಸ್ವೀಕರಿಸಿ ಮಾತನಾಡಿದ ಎಸಿಎಫ್ ಶಂಕರ್ .ಸಾಗುವಾನಿ ನಡೆತೋಪಿನಲ್ಲಿ ಸಣ್ಣ ,ಹುಳ ಹಿಡಿದ ಮರಗಳನ್ನು ಕಡಿಯುವುದು ವ್ಯವಸ್ಥೆಯ ಒಂದು ಭಾಗ.ಇದೊಂದು ನಿರಂತರ ಪ್ರಕ್ರೀಯೆ. ಮನವಿಯನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಆರ್ಎಫ್ಒ ರಂಗಸ್ವಾಮಿ, ಕರ್ನಾಟಕ ರಕ್ಷಣಾ ವೇದಿಕೆ ನಗರ ಅಧ್ಯಕ್ಷ ನವೀನ್, ಹೋಬಳಿ ಅಧ್ಯಕ್ಷ ಟಿಂಕರ್ ಅಮ್ಜದ್, ಬಿಕೆಎಸ್ ಸಂಘಟನೆಯ ನರಸಿಂಹರಾಜಪುರ ತಾಲ್ಲೂಕು ಅಧ್ಯಕ್ಷ ಮಂಜುನಾಥ, ವಾಟ್ ಕೊಡಿಗೆ ಹಾಡಿ ಅಧ್ಯಕ್ಷ ಮಂಜುನಾಥ್, ಮಣಬೂರು ಹಾಡಿ ಅಧ್ಯಕ್ಷ ರವಿ,ಶ್ರೀನಿವಾಸ, ಭಾಸ್ಕರ್, ಪ್ರವೀಣ್, ಇಸ್ಮಾಯಿಲ್ ಇದ್ದರು.