ರಾಮನಗರ: ದಶಕದ ನಂತರ ನಡೆದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಚುನಾವಣೆಯ ಮತ ಎಣಿಕೆ ಕಾರ್ಯವು ಇಂದು ನಡೆಯಲಿದೆ.
ಜಿಲ್ಲೆಯಲ್ಲಿನ ಮೂರು ಎಪಿಎಂಸಿಗಳ ಒಟ್ಟು 29 ಕ್ಷೇತ್ರಗಳ 69 ಅಭ್ಯರ್ಥಿಗಳ ಭವಿಷ್ಯ ಈ ಮೂಲಕ ನಿರ್ಧಾರವಾಗಲಿದೆ. ಬಹುತೇಕ ಕಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಬೆಂಬಲಿತರ ನಡುವೆ ಜಿದ್ದಾಜಿದ್ದಿನ ರಾಜಕೀಯ ಚಟುವಟಿಕೆ ನಡೆದಿವೆ. ಬಿಜೆಪಿ ಬೆಂಬಲಿತರು ಹಾಗೂ ಪಕ್ಷೇತರರೂ ಅದೃಷ್ಟ ಪರೀಕ್ಷೆಯ ಹೊಸ್ತಿಲಲ್ಲಿ ಕಾದು ಕುಳಿತಿದ್ದಾರೆ.
ಒಟ್ಟು 1,35,200 ಮತದಾರರ ಪೈಕಿ ಕೇವಲ 50,214ಮತದಾರರು ಮಾತ್ರ ಹಕ್ಕು ಚಲಾಯಿಸಿದ್ದಾರೆ. ಜಿಲ್ಲೆಯಲ್ಲಿ ಸರಾಸರಿ ಶೇ 37.14 ಪ್ರಮಾಣದ ಮತದಾನ ಮಾತ್ರ ನಡೆದಿದೆ. ಹೀಗಾಗಿ ಮಧ್ಯಾಹ್ನದ ವೇಳೆಗೆ ಫಲಿತಾಂಶ ಸಿಗುವ ನಿರೀಕ್ಷೆ ಇದೆ.
ಎಲ್ಲೆಲ್ಲಿ ಮತ ಎಣಿಕೆ: ಮತ ಎಣಿಕೆ ಕಾರ್ಯವು ಬೆಳಗ್ಗೆ ೮ರಿಂದ ಆಯಾ ತಾಲೂಕು ಕೇಂದ್ರದಲ್ಲಿ ನಡೆಯಲಿದೆ. ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕನಕಪುರದ ಸರ್ಕಾರಿ ಜಿ.ಟಿ.ಟಿ.ಸಿ ಕಾಲೇಜು ಆವರಣ, ಚನ್ನಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಮಾಗಡಿಯ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಇದಕ್ಕಾಗಿ ಈಗಾಗಲೇ ವ್ಯವಸ್ಥೆ ಮಾಡಲಾಗಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ರಾಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೃಷಿ ಉತ್ಪನ್ನ ಕ್ಷೇತ್ರದ ಮತ ಏಣಿಕೆಗಾಗಿ ಒಟ್ಟು 6 ಟೇಬಲ್ಗಳ ವ್ಯವಸ್ಥೆ ಮಾಡಲಾಗಿದೆ.
ಅಂತೆಯೇ ಅತಿ ಕಡಿಮೆ ಮತಗಳಿರುವ ವರ್ತಕರ ಕ್ಷೇತ್ರದ ಎಣಿಕೆ ಕಾರ್ಯವು 1 ಟೇಬಲ್ನಲ್ಲಿ ನಡೆಯಲಿದೆ. ಮತಎಣಿಕೆ ಕೇಂದ್ರದ ಸುತ್ತಲೂ ಸಂಜೆ 5 ಗಂಟೆಯವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದ್ದು, ಗುಂಪು ಸೇರುವುದು, ಪಟಾಕಿ ಸಿಡಿಸಿ ಸಂಭ್ರಮಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ತಹಶೀಲ್ದಾರ್ ರಘುಮೂರ್ತಿ ತಿಳಿಸಿದರು.