ಜಲ್ಲಿಕಟ್ಟು ನಿಷೇಧದ ವಿರುದ್ಧ ತಮಿಳುನಾಡಿನಲ್ಲಿ ಹೋರಾಟ ತೀವ್ರವಾಗುತ್ತಿದ್ದಂತೆ ತಮಿಳು ಚಿತ್ರರಂಗವೂ ಪ್ರತಿಭಟನೆಗೆ ಸಾಥ್ ನೀಡಿದೆ. ಆದರೆ ಇದೇ ವಿಷಯವನ್ನು ಬಳಸಿಕೊಂಡು ಕೆಲವರು ತಮಿಳು ಚಿತ್ರತಾರೆಗಳ ವಿರುದ್ಧ ಸುಳ್ಳು ಪ್ರಚಾರವನ್ನೂ ಮಾಡುತ್ತಿದ್ದಾರೆ.
ತ್ರಿಷಾ, ಧನುಷ್, ಮಾಧವನ್ ಇನ್ನೂ ಮೊದಲಾದ ತಾರೆಗಳು ‘ಪೆಟಾ’ (ಅಂತರ ರಾಷ್ಟ್ರೀಯ ಪ್ರಾಣಿ ದಯಾ ಸಂಘ)ಸದಸ್ಯರಾಗಿದ್ದು ಜಲ್ಲಿಕಟ್ಟು ಸಂಪ್ರದಾಯ ವಿರೋಧಿಸುತ್ತಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ.
ನಟ ಧನುಷ್ ಅವರು ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ರವನ್ನು ಬಳಸಿ ಪೆಟಾ ಜಾಹೀರಾತಿನ ಟೀಷರ್ಟ್ ಧರಿಸಿರುವಂತೆ ಅದನ್ನು ತಿದ್ದಿ ಧನುಷ್ ಜಲ್ಲಿಕಟ್ಟು ನಿಷೇಧದ ಪರ ಇದ್ದಾರೆ ಎಂಬ ಗಾಳಿಸುದ್ದಿಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಲಾಗಿತ್ತು. ಆದರೆ ಅದಿತಿ ರವೀಂದ್ರನಾಥ್ ಎಂಬುವರು ಧನುಷ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ತೆಗೆದ ಚಿತ್ರ ಮತ್ತು ತಿದ್ದಿದ ಚಿತ್ರವನ್ನು ಒಟ್ಟಿಗೆ ಟ್ವಿಟರ್ನಲ್ಲಿ ಪ್ರಕಟಿಸಿದರು. ಅದೇ ಚಿತ್ರಗಳನ್ನು ಮರುಟ್ವೀಟ್ ಮಾಡಿ ಸತ್ಯವನ್ನು ಜನತೆಯ ಮುಂದಿಟ್ಟಿದ್ದಾರೆ ಧನುಷ್.