ಬೆಂಗಳೂರಿನ ಅರಮನೆ ಮೈದಾನದಲ್ಲಿ ಇತ್ತೀಚೆಗೆ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮವು ವಿವೇಕಾನಂದರ ಆದರ್ಶ, ಧ್ಯೇಯಗಳನ್ನು ಪ್ರತಿಬಿಂಬಿಸದೆ, ಸರ್ಕಾರದ ಸಾಧನೆ ಬಿತ್ತರಿಸುವ ಕಾರ್ಯಕ್ರಮದಂತಿತ್ತು.
ಸಭೆಗೆ ಪ್ರತೀ ಕಾಲೇಜಿನಿಂದ ಎರಡು ಬಸ್ಗಳಲ್ಲಿ ವಿದ್ಯಾರ್ಥಿಗಳನ್ನು ಕಳುಹಿಸುವಂತೆ ಪ್ರಾಂಶುಪಾಲರಿಗೆ ತಾಕೀತು ಮಾಡಲಾಗಿತ್ತು. ವಿದ್ಯಾರ್ಥಿಗಳಿಗೆ ಊಟ, ನೀರು, ತಿಂಡಿ ಹಾಗೂ ಟೀ ಶರ್ಟ್ಗಳನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಊಟ, ತಿಂಡಿಯ ಮಾತಿರಲಿ ಕುಡಿಯಲು ನೀರಿನ ವ್ಯವಸ್ಥೆಯನ್ನೂ ಸರಿಯಾಗಿ ಮಾಡಿರಲಿಲ್ಲ.
ವಿದ್ಯಾರ್ಥಿಗಳಿಗೆ ಉತ್ತಮ ಸಂದೇಶ ನೀಡುವ ಬದಲು ಅವರು ಮತ್ತೊಮ್ಮೆ ಇಂಥ ಕಾರ್ಯಕ್ರಮಗಳಿಗೆ ಬರದಂತಹ ಅನುಭವವನ್ನು ಅಧಿಕಾರಿಗಳು ದೊರಕಿಸಿಕೊಟ್ಟರು.ಮುಂದಾದರೂ ಇಂತಹ ನೆಪ ಮಾತ್ರದ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ಸರ್ಕಾರ ಬಿಡಲಿ.
-ಕೌಡ್ಲೆರವಿ, ಕಿರಣ್ ಎಸ್., ಬೆಂಗಳೂರು