ಮುಂಬೈ: ಎಲ್ಲಾ ಅಡೆ ತಡೆಗಳನ್ನು ದಾಟಿ ಚೊಚ್ಚಲ ರಣಜಿ ಟ್ರೋಫಿ ಎತ್ತಿ ಹಿಡಿದಿರುವ ಗುಜರಾತ್ ತಂಡಕ್ಕೆ ಹೊಸ ಸವಾಲು ಎದುರಾಗಿದೆ. ಪಾರ್ಥಿವ್ ಪಟೇಲ್ ನಾಯಕತ್ವದ ಈ ತಂಡ ಇರಾನಿ ಕಪ್ಗಾಗಿ ಐದು ದಿನ ನಡೆಯುವ ಪಂದ್ಯದಲ್ಲಿ ಭಾರತ ಇತರೆ ತಂಡದ ಎದುರು ಪೈಪೋಟಿ ನಡೆಸಲಿದೆ. ಇದಕ್ಕಾಗಿ ಇಲ್ಲಿನ ಬ್ರಬೋರ್ನ್ ಕ್ರೀಡಾಂ ಗಣದಲ್ಲಿ ಶುಕ್ರವಾರ ವೇದಿಕೆ ಸಜ್ಜು ಗೊಂಡಿದೆ.
ಇಂದೋರ್ನಲ್ಲಿ ನಡೆದಿದ್ದ ರಣಜಿ ಫೈನಲ್ನಲ್ಲಿ ಗುಜರಾತ್ 41 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಮಣಿಸಿ ಟ್ರೋಫಿ ಎತ್ತಿ ಹಿಡಿದಿತ್ತು. ರಣಜಿ ಯಲ್ಲಿ ಪ್ರಶಸ್ತಿ ಗೆಲ್ಲುವ ತಂಡ ಮತ್ತು ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಒಳಗೊಂಡ ಭಾರತ ಇತರೆ ತಂಡದ ನಡುವೆ ಪ್ರತಿ ವರ್ಷ ಪಂದ್ಯ ನಡೆಯುತ್ತದೆ. ಟೆಸ್ಟ್ ಪರಿ ಣತ ಬ್ಯಾಟ್ಸ್ಮನ್ ಚೇತೇಶ್ವರ ಪೂಜಾರ ಇತರೆ ತಂಡವನ್ನು ಮುನ್ನಡೆಸಲಿದ್ದಾರೆ.
ಬ್ಯಾಟಿಂಗ್ನಲ್ಲಿ ಬಲಿಷ್ಠ: ಬ್ಯಾಟಿಂಗ್ನಲ್ಲಿ ಬಲಿಷ್ಠವಾಗಿರುವುದೇ ಗುಜರಾತ್ ತಂಡದ ಶಕ್ತಿ. ಈ ತಂಡದ ಆರಂಭಿಕ ಬ್ಯಾಟ್ಸ್ಮನ್ ಪ್ರಿಯಾಂಕ್ ಪಾಂಚಾಲ್ ರಣಜಿಯಲ್ಲಿ ಹತ್ತು ಪಂದ್ಯಗಳಿಂದ ಒಟ್ಟು 1310 ರನ್ ಕಲೆ ಹಾಕಿದ್ದಾರೆ. ಸಮಿತ್ ಗೊಹೆಲ್ 914 ರನ್ ಹೊಡೆದಿದ್ದಾರೆ. ರಣಜಿ ಫೈನಲ್ನಲ್ಲಿ ಪಾರ್ಥಿವ್ ಒಟ್ಟು 233 ರನ್ ಗಳಿಸಿದ್ದರು. ಆದ್ದರಿಂದ ಗುಜರಾತ್ ಬ್ಯಾಟ್ಸ್ಮನ್ಗಳನ್ನು ಕಟ್ಟಿ ಹಾಕುವ ಸವಾಲು ಇತರೆ ತಂಡದ ಬೌಲರ್ಗಳ ಮುಂದಿದೆ.
ಉತ್ತಮ ಅವಕಾಶ: ಇಂಗ್ಲೆಂಡ್ ಎದುರಿನ ಸರಣಿಯ ಬಳಿಕ ಆಸ್ಟ್ರೇಲಿಯಾ ತಂಡ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತಕ್ಕೆ ಬರಲಿದೆ. ನಂತರವೂ ಅನೇಕ ಟೆಸ್ಟ್ ಸರಣಿಗಳಿವೆ. ಆದ್ದರಿಂದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಗಳಿಸಲು ಆಟಗಾರರರಿಗೆ ಈ ಪಂದ್ಯ ಉತ್ತಮ ಅವಕಾಶವಾಗಿದೆ.
ಪಂದ್ಯ ಆರಂಭ: ಬೆಳಿಗ್ಗೆ 9.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್.
‘ವಿಕೆಟ್ ಕೀಪರ್ಗಳ ಹೋರಾಟವಲ್ಲ’
ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಕೆಟ್ ಕೀಪರ್ಗಳಾದ ಪಾರ್ಥಿವ್ ಪಟೇಲ್ ಮತ್ತು ಬಂಗಾಳದ ವೃದ್ಧಿಮಾನ್ ಸಹಾ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ.
ಇಂಗ್ಲೆಂಡ್ ಎದುರಿನ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ತಂಡದಲ್ಲಿದ್ದ ವೃದ್ಧಿಮಾನ್ ನಂತರ ಗಾಯಗೊಂಡಿದ್ದರು. ಆದ್ದರಿಂದ ಪಾರ್ಥಿವ್ ಉಳಿದ ಮೂರು ಟೆಸ್ಟ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದು ಮಿಂಚಿದ್ದರು. ಆದ್ದರಿಂದ ಮುಂಬರುವ ಟೆಸ್ಟ್ ಸರಣಿಗಳಿಗೆ ಯಾರು ಸೂಕ್ತ ಎನ್ನುವ ಚರ್ಚೆ ನಡೆಯುತ್ತಿದೆ.
ಇದರ ಬಗ್ಗೆ ಪಾರ್ಥಿವ್ ಅವರನ್ನು ಪ್ರಶ್ನಿಸಿದಾಗ ‘ಈ ಪಂದ್ಯ ವಿಕೆಟ್ ಕೀಪರ್ಗಳ ನಡುವಣ ಹೋರಾಟವಲ್ಲ. ಗುಜರಾತ್ ಮತ್ತು ಭಾರತ ಇತರೆ ತಂಡದ ಪಂದ್ಯ’ ಎಂದು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.