ಕಣ್ಣೂರು : ಬಿಜೆಪಿ ಕಾರ್ಯಕರ್ತನ ಕೊಲೆ
ತಲಚೇರಿ, ಕೇರಳ(ಪಿಟಿಐ): ಕಣ್ಣೂರು ಜಿಲ್ಲೆಯ ಧರ್ಮಡಂನಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬನನ್ನು ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಆಂಡಲೂರು ಬಿಜೆಪಿ ಸ್ಥಳೀಯ ಘಟಕ ಅಧ್ಯಕ್ಷ ಸಂತೋಷ್ ಕೊಲೆಯಾದವರು. ಘಟನೆ ಹಿಂದೆ ಸಿಪಿಎಂ ಕೈವಾಡ ಇದೆ ಎಂದು ಬಿಜೆಪಿ ಆರೋಪಿಸಿದ್ದು ಕಣ್ಣೂರು ಜಿಲ್ಲೆಯಲ್ಲಿ ಗುರುವಾರ ಬಂದ್ ಆಚರಿಸಿದೆ.
***
ಬಜೆಟ್ : ಮಾಹಿತಿ ಕೇಳಿದ ಆಯೋಗ
ನವದೆಹಲಿ (ಪಿಟಿಐ): ಕೇಂದ್ರ ಬಜೆಟ್ ಮುಂದೂಡಲು 2012ರಲ್ಲಿ ಸರ್ಕಾರ ಅನುಸರಿಸಿದ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡುವಂತೆ ಚುನಾವಣಾ ಆಯೋಗವು ಸಂಪುಟ ಕಾರ್ಯಾಲಯಕ್ಕೆ ಸೂಚಿಸಿದೆ. ಈ ಸಂಬಂಧ ಗುರುವಾರ ಮತ್ತೊಂದು ಪತ್ರ ಬರೆದಿರುವ ಆಯೋಗ, ಶನಿವಾರ ಬೆಳಿಗ್ಗೆಯ ಒಳಗಾಗಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ. ಬಜೆಟ್ ಮುಂದೂಡಲು ಅನುಸರಿಸಿದ ನಿಯಮಗಳ ಜೊತೆಗೆ ಬಜೆಟ್ ಸಿದ್ಧತೆ ಮತ್ತು ಮಂಡಿಸುವ ಪ್ರಕ್ರಿಯೆಯ ವಿವರಗಳನ್ನೂ ನೀಡುವಂತೆ ಅದು ಕೇಳಿದೆ.
***
ಲಷ್ಕರ್–ಎ– ತಯಬಾ ಕಮಾಂಡರ್ ಸಾವು
ಶ್ರೀನಗರ: ಉತ್ತರ ಕಾಶ್ಮೀರದ ಬಂಡಿಪೊರ ಜಿಲ್ಲೆಯ ಹಾಜಿನ್ ಪ್ರದೇಶದಲ್ಲಿ ಗುರುವಾರ ಗುಂಡಿನ ಕಾಳಗದಲ್ಲಿ ಲಷ್ಕರ್–ಎ– ತಯಬಾದ ಪ್ರಾದೇಶಿಕ ಕಮಾಂಡರ್ ಅಬು ಮುಸೈಬ್ ಹತನಾಗಿದ್ದಾನೆ.