ತುಮಕೂರು: ಜಿಲ್ಲೆಯಲ್ಲಿ ಹಾದು ಹೋಗುವ ನಾಲ್ಕು ಹೆದ್ದಾರಿಗಳಲ್ಲಿ ನಿರಂತರ ಗಸ್ತು ತಿರುಗಲು ನಾಲ್ಕು ಹೊಸ ಇನ್ನೋವಾ ವಾಹನಗಳಿಗೆ ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂಥ್ ಚಾಲನೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದ ಇಶಾ ಪಂಥ್, ’ಹೆದ್ದಾರಿಗಳಲ್ಲಿ ಗಸ್ತು ಹೆಚ್ಚಿಸುವುದರಿಂದ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ. ಅಪಘಾತ ಸಂದರ್ಭಗಳಲ್ಲಿ ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ, ತಕ್ಷಣ ಆಸ್ಪತ್ರೆ ಸೇರಿಸಲು ಅನುಕೂಲ ಕಲ್ಪಿಸಲಾಗಿದೆ. ಸ್ಟ್ರೇಚರ್ ಹಾಗೂ ಪ್ರಥಮ ಚಿಕಿತ್ಸೆ ವ್ಯವಸ್ಥೆಯೂ ಇರಲಿದೆ’ ಎಂದು ಹೇಳಿದರು.
ಹೆದ್ದಾರಿ ಸುರಕ್ಷತಾ ಯೋಜನೆಯಡಿ ರಾಜ್ಯವ್ಯಾಪಿ ಹೆದ್ದಾರಿಗಳಲ್ಲಿ ಗಸ್ತು ಕರ್ತವ್ಯಕ್ಕೆ 100 ಇನ್ನೋವಾ ವಾಹನಗಳನ್ನು ಖರೀದಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 48ರ ನಂದಿಹಳ್ಳಿ ಗಡಿಯಿಂದ ಸೀಬಿವರೆಗೆ, ಸೀಬಿಯಿಂದ ಶಿರಾದ ತಾವರೆಕೆರೆ ಗಡಿ, ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ಅಂಚೆಪಾಳ್ಯದಿಂದ ಎಡೆಯೂರು ಗೋಂದಿಹಳ್ಳಿ, ರಾಷ್ಟ್ರೀಯ ಹೆದ್ದಾರಿ 206ರ ತುಮಕೂರಿನಿಂದ ತಿಪಟೂರಿನ ಕೊನೆಹಳ್ಳಿ ಗಡಿಯವರೆಗೆ ನಿಯೋಜಿಸಲಾಗಿದೆ. ಈ ವಾಹನಗಳು 24 ಗಂಟೆಗಳ ಕಾಲ ಗಸ್ತು ತಿರುಗಲಿವೆ. ಗಸ್ತು ವಾಹನದಲ್ಲಿ ಪಿಟಿ ಝಡ್ ಕ್ಯಾಮೆರಾ ಕೂಡ ಅಳವಡಿಸಲಾಗಿದೆ.