ಕುಣಿಗಲ್: ವಿದ್ಯಾರ್ಥಿ ಪೊಲೀಸ್ ದಳದ ವಿದ್ಯಾರ್ಥಿಗಳಿಗೆ ಪಿಎಸ್ಐ ಕೇಶವಮೂರ್ತಿ ಗುರುವಾರ ಪೊಲೀಸ್ ಇಲಾಖೆ ಕಾರ್ಯವೈಖರಿ ಬಗ್ಗೆ ಅರಿವು ಮೂಡಿಸಿದರು.
ಪಟ್ಟಣದ ಮಹಾತ್ಮ ಗಾಂಧಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ವಿದ್ಯಾರ್ಥಿ ಪೊಲೀಸ್ ದಳವನ್ನು ಪ್ರಾರಂಭಿಸಲಾಗಿದೆ. 22 ವಿದ್ಯಾರ್ಥಿ ಹಾಗೂ 22 ವಿದ್ಯಾರ್ಥಿನಿಯರ ತಂಡವನ್ನು ರಚಿಸಲಾಗಿದೆ. ಶಿಕ್ಷಕರ ಪೈಕಿ ಶಿವಪ್ರಕಾಶ್ ಸಮುದಾಯ ಪೊಲೀಸ್ ಅಧಿಕಾರಿ ಹಾಗೂ ಲೇಖಶ್ರೀ ಸಹಾಯಕ ಸಮುದಾಯ ಪೊಲೀಸ್ ಅಧಿಕಾರಿಯಾಗಿ ನೇಮಿಸಲಾಗಿದೆ.
ಪೊಲೀಸ್ ಇಲಾಖೆ ವತಿಯಿಂದ ಪ್ರತಿ ತಿಂಗಳ ಎರಡನೇ ಗುರುವಾರ ಕಾನ್ಸ್ಟೇಬಲ್ ವಿಜಯ್ಕುಮಾರ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಇಲಾಖೆ ನೀತಿ ನಿಯಮಗಳ ಹಾಗೂ ಕವಾಯಿತುಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ವಿದ್ಯಾರ್ಥಿ ಪೊಲೀಸ್ ದಳದ ವಿದ್ಯಾರ್ಥಿಗಳು ಗುರುವಾರ ಠಾಣೆಗೆ ಆಗಮಿಸಿದಾಗ, ಪಿಎಸ್ಐ ಕೇಶವಮೂರ್ತಿ ಸ್ವಾಗತಿಸಿ, ಸೆಂಟ್ರಿ, ಕಾನೂನು ಸುವ್ಯವಸ್ಥೆ, ಅಪರಾಧ, ಮಹಿಳಾ ಮತ್ತು ಮಕ್ಕಳ, ಸೆಲ್, ದಾಖಲೆ ಹಾಗೂ ಗಣಕ ಯಂತ್ರದ ವಿಭಾಗಗಳನ್ನು ಪರಿಚಯಿಸಿ, ಬಂದೂಕುಗಳ ಬಗ್ಗೆ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ ಜೈಲು ಎಂದರೆ ಬಳ್ಳಾರಿ ಜೈಲು ಮಾತ್ರ ಎಂಬ ಮಾಹಿತಿ ಇತ್ತು. ಆದರೆ ಠಾಣೆಯ ಸೆಲ್ ಹಾಗೂ ಜಿಲ್ಲಾ ಕೇಂದ್ರದ ಕಾರಾಗೃಹದ ಮಾಹಿತಿ ತಿಳಿದು ಕೊಂಡರು.
ಪಿಎಸ್ಐ ಕೇಶವಮೂರ್ತಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ನಾಗರಿಕ ಪ್ರಜ್ಞೆ, ಪರಿಸರ ಕಾಳಜಿ ಹಾಗೂ ಕಾನೂನಿನ ಅರಿವು ಮೂಡಿಸಿ ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಶ್ರಮಿಸುವ ಉದ್ದೇಶದಿಂದ ವಿದ್ಯಾರ್ಥಿ ಪೊಲೀಸ್ ದಳ ಪ್ರಾರಂಭಿಸಲಾಗಿದೆ ಎಂದರು.