ದಾವಣಗೆರೆ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸಾಲ ಮನ್ನಾ ಮಾಡಿ, ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗುರುವಾರ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಸತತ ಎರಡು ವರ್ಷಗಳಿಂದ ಬರ ಆವರಿಸಿದೆ. ಬೆಳೆ ಕೈಕೊಟ್ಟ ಪರಿಣಾಮ ರೈತರು ಆರ್ಥಿಕವಾಗಿ ದಿವಾಳಿಯಾಗಿದ್ದಾರೆ. ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಹೀಗಾಗಿ ರೈತರ ಸಾಲ ಮನ್ನಾ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ದೇಶದ ಬ್ಯಾಂಕ್ಗಳನ್ನು ವಂಚಿಸಿ ರುವ ದೊಡ್ಡ ಉದ್ಯಮಿಗಳ ಸಾಲವನ್ನೇ ಸರ್ಕಾರ ಮನ್ನಾ ಮಾಡಿದೆ. ಕೆಲವರಿಗೆ ಭಾರಿ ರಿಯಾಯಿತಿ ಕೊಟ್ಟಿದೆ. ಆದರೆ, ಸಾಲದ ಸುಳಿಗೆ ಸಿಲುಕಿರುವ ರೈತರನ್ನು ಉಳಿಸಲು ಸರ್ಕಾರಗಳು ಮುಂದಾಗು ತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಿಗಡಾಯಿಸಿದೆ. ಜನ, ಜಾನುವಾರು ನೀರಿಲ್ಲದೇ ಪರದಾಡುವಂತಾಗಿದೆ. ಕುಡಿಯುವ ನೀರು ಒದಗಿಸಲು ಅವಶ್ಯವಿರುವ ಕಡೆ ತುರ್ತು ಕಾಮಗಾರಿಗಳನ್ನು ನಡೆಸಬೇಕು. ನೀರಿನ ಮೂಲಗಳು ಲಭ್ಯ ಇರದ ಸ್ಥಳಗಳಲ್ಲಿ ಟ್ಯಾಂಕರ್ ಮೂಲಕ
ನೀರು ಪೂರೈಸಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಪ್ರದೇಶದಲ್ಲಿ ಗುಳೇ ಹೋಗುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಕೆಲಸದ ದಿನ ಗಳು ಮತ್ತು ಕೂಲಿಯ ಮೊತ್ತವನ್ನು ಹೆಚ್ಚಿ ಸಬೇಕು. ರೈತರು, ಕೃಷಿ ಕಾರ್ಮಿಕರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ರೈತ ಮುಖಂಡರಾದ ನಾಗಪ್ಪ, ಎಚ್.ಓಂಕಾರಪ್ಪ, ಅರುಣ್ಕುಮಾರ್, ಆನಗೋಡು ಭೀಮಣ್ಣ, ಎನ್.ಕೆ. ಲಕ್ಷ್ಮೀಪತಿ, ಶಂಭುಲಿಂಗಪ್ಪ, ಜಿ.ಪ್ರಭು ಗೌಡ, ಎಂ.ಬಿ.ಪಾಟೀಲ್, ಪರಮೇಶ್ವರಪ್ಪ, ಎಚ್.ವಿ.ಬಸವರಾಜಪ್ಪ ಮತ್ತಿತರರು ಇದ್ದರು.