ಹುಬ್ಬಳ್ಳಿ: ಅನಾರೋಗ್ಯದಿಂದ ಹೆಂಡತಿ ಸಾವಿಗೀಡಾದ ಸುದ್ದಿ ಕೇಳಿದ ತಕ್ಷಣ ಗಂಡನೂ ಹೃದಯಾಘಾತದಿಂದ ಸಾವಿಗೀಡಾದ ಘಟನೆ ತಾಲ್ಲೂಕಿನ ಕೋಳಿವಾಡ ಗ್ರಾಮದಲ್ಲಿ ಗುರುವಾರ ರಾತ್ರಿ ನಡೆದಿದೆ.
ನೀಲವ್ವ ಗುದ್ದಿನ (65) ಹಾಗೂ ದೇವಪ್ಪ ಗುದ್ದಿನ (71) ಎಂಬುವವರೇ ಸಾವಿನಲ್ಲೂ ಒಂದಾದ ದಂಪತಿ.
ನೀಲವ್ವ ಅವರಿಗೆ ರಕ್ತದೊತ್ತಡ ಕಡಿಮೆ ಇತ್ತು. ಹೀಗಾಗಿ, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ತರುವ ಮಾರ್ಗಮಧ್ಯದಲ್ಲಿಯೇ ಸಾವಿಗೀಡಾಗಿದರು. ರಾತ್ರಿ 10.30ಕ್ಕೆ ಈ ಘಟನೆ ನಡೆಯಿತು. ಹೆಂಡತಿಯ ಸಾವಿನ ಸುದ್ದಿ ಕೇಳಿದ ದೇವಪ್ಪ ಗುದ್ದಿನ ಅವರು ಗಾಬರಿಯಾಗಿ ರಾತ್ರಿ 11ಕ್ಕೆ ಕೊನೆಯುಸಿರೆಳೆದರು.
ಹಲವು ದಿನಗಳಿಂದ ಹೆಂಡತಿಗೆ ಚಿಕಿತ್ಸೆ ಕೊಡಿಸುತ್ತಿದ್ದ ದೇವಪ್ಪ ಅವರಿಗೆ ನೀಲವ್ವ ಅವರ ಸಾವಿನ ಸುದ್ದಿ ಬರಸಿಡಿಲು ಎರಗಿದಂತಾಗಿಯಿತು. ಈ ಆಘಾತದಿಂದ ಚೇತರಿಸಿಕೊಳ್ಳಲು ದೇವಪ್ಪ ಅವರಿಗೆ ಆಗಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ದಂಪತಿ ಸಾವಿನ ಸುದ್ದಿ ತಿಳಿದ ಊರಿನವರು ತಂಡೋಪತಂಡವಾಗಿ ಅವರ ಮನೆತೆ ತೆರಳಿ ದಂಪತಿಯ ಅಂತಿಮ ದರ್ಶನ ಪಡೆದರು.