ಪ್ರೊ. ಮೈವಿಸು
**
ಸಂಗೀತ ವಿದುಷಿ, ಬೋಧಕಿ ಮತ್ತು ಸಂಘಟಕರಾಗಿ ಪರಿಚಿತರಾಗಿರುವ ಗೀತಾ ಸತ್ಯಮೂರ್ತಿ ಅವರು 2002ರಲ್ಲಿ ಆರಂಭಿಸಿದ ‘ಸಪ್ತಸ್ವರ ಸಂಗೀತ ವಿದ್ಯಾಲಯ’ಕ್ಕೆ ಈಗ 15ರ ಸಂಭ್ರಮ.
ಆರ್.ಆರ್. ಕೇಶವಮೂರ್ತಿ ಅವರಲ್ಲಿ ಸಂಗೀತಾಭ್ಯಾಸ ಮಾಡಿದ ಗೀತಾ ಸುಗಮ ಸಂಗೀತವನ್ನು ಅಭ್ಯಾಸ ಮಾಡಿದ್ದು ಎಚ್.ಕೆ. ನಾರಾಯಣ ಅವರ ಬಳಿ. ಶಾಸ್ತ್ರೀಯ ಹಾಗೂ ಸುಗಮ ಸಂಗೀತಗಳೆರಡರಲ್ಲೂ ಕಚೇರಿ ನೀಡಿದರೂ ಗೀತಾ ಅವರ ‘ಭಕ್ತಿ ಸಂಗೀತ’ ಕಾರ್ಯಕ್ರಮಗಳು ಹೆಚ್ಚು ಜನಪ್ರಿಯ. ಹರಿದಾಸರ ಪದಗಳು, ಶ್ರೀನಿವಾಸ ಕಲ್ಯಾಣ ಹಾಗೂ ದಾಸವಾಣಿ - ಸಿ.ಡಿ.ಗಳಿಗೆ ಅವರು ಸಂಗೀತ ಸಂಯೋಜನೆಯನ್ನೂ ಮಾಡಿದ್ದಾರೆ.
‘ಸಪ್ತಸ್ವರ ಸಂಗೀತ ವಿದ್ಯಾಲಯ’ದ ಮೂಲಕ ಅವರು ನೂರಾರು ಕಿರಿಯರಿಗೆ, ಕರ್ನಾಟಕ ಶಾಸ್ತ್ರೀಯ ಹಾಗೂ ಸುಗಮ ಸಂಗೀತಗಳೆರಡರಲ್ಲೂ ಶಿಕ್ಷಣ ನೀಡುತ್ತಾ ಬಂದಿದ್ದಾರೆ. ಸ್ವಾತಂತ್ರ್ಯ ಗೀತೋತ್ಸವ, ಗುರುವಂದನಾ, ನಾಡು ನುಡಿ ಗೀತೋತ್ಸವ, ಹಿರಿಯರ ನಮನ, ಹಿರಿಯ ವಾಗ್ಗೇಯಕಾರರ ಆರಾಧನೆ, ರಾಗ ಪರಿಚಯ, ಸಂಗೀತ ಶಿಬಿರಗಳನ್ನು ಹಮ್ಮಿಕೊಂಡು ಸಂಗೀತಾಸಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಈ ಉಪನ್ಯಾಸ, ಪ್ರಾತ್ಯಕ್ಷಿಕೆಗಳನ್ನು ಸಂಗೀತಗಾರರು, ಸಂಗೀತಜ್ಞರು, ಕವಿಗಳು ನಡೆಸಿಕೊಟ್ಟಿದ್ದಾರೆ. ’ಹೆಜ್ಜೆ ಗುರುತು’ ಹಾಗೂ ’ಸ್ವರ ಯಾನದ ದಶಕ’ ಎಂಬ ಎರಡು ಸಂಚಿಕೆಗಳಲ್ಲಿ, ವಿದ್ಯಾಲಯ ಸಾಗಿ ಬಂದಿರುವ ಹಾದಿಯನ್ನು ದಾಖಲಿಸಲಾಗಿದೆ.
**
ಇಂದು ಸಂಗೀತೋತ್ಸವ
ಗೀತ ವೈವಿಧ್ಯ: ಎಚ್.ಆರ್. ಲೀಲಾವತಿ ಮತ್ತು ಎನ್. ರಘು. ಬಳಿಕ ಗೀತೋತ್ಸವ ಮತ್ತು ಗೀತ ಚಿತ್ರ.
ಉಪಸ್ಥಿತಿ: ವಿಜಯ ಹಾವನೂರು, ಡಾ. ನಾ. ಸೋಮೇಶ್ವರ.
ಸ್ಥಳ: ಜೆ.ಎಸ್.ಎಸ್. ಶಾಲಾ ಸಭಾಂಗಣ, ಬನಶಂಕರಿ 3ನೇ ಹಂತ.
ಸಮಯ– ಶನಿವಾರ (ಜ.21) ಮಧ್ಯಾಹ್ನ 3.