ಅಧಿಕಾರದ ಗದ್ದುಗೆ ಏರಲು ರಾಜಕಾರಣಿಗಳು ಹಲವಾರು ಸಾಹಸಗಳನ್ನು ಮಾಡಿ ಜನರ ಮನವೊಲಿಕೆಗೆ ಯತ್ನಿಸುತ್ತಾರೆ. ಆದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಉತ್ತರಾಖಂಡದ ಹೃಷಿಕೇಶದಲ್ಲಿ ನಡೆದ ಪಕ್ಷದ ರ್ಯಾಲಿಯಲ್ಲಿ ಪ್ರಧಾನಿ ತೊಡುವ ಉಡುಪುಗಳ ಬಗ್ಗೆ ಟೀಕೆ ಮಾಡಿದ್ದಾರೆ. ಜೊತೆಗೆ ಆ ಸಂದರ್ಭದಲ್ಲಿ ತಾವು ಧರಿಸಿದ್ದ ಹರಿದ ಕುರ್ತಾವನ್ನು ಜನರೆಡೆಗೆ ತೋರಿಸಿ ಅನುಕಂಪ ಗಿಟ್ಟಿಸಲು ಯತ್ನಿಸಿದ್ದಾರೆ (ಪ್ರ.ವಾ., ಜ. 17).
ಇದು ಒಂದು ರೀತಿ ಹೊಸ ಬಗೆ ಪ್ರಚಾರ ತಂತ್ರ. ಹಾಗಿಲ್ಲವೆಂದಾದರೆ, ರಾಹುಲ್ ಅವರಿಗೆ ತೊಡುವುದಕ್ಕೆ ಸರಿಯಾದ ಬಟ್ಟೆ ಇಲ್ಲವೇ? ಪ್ರಚಾರಕ್ಕಾಗಿ ಬಟ್ಟೆ ಹರಿದುಕೊಂಡು ಬಂದರೇ? ಅಥವಾ ನೋಟು ನಿಷೇಧದಿಂದಾಗಿ ಬಟ್ಟೆ ಖರೀದಿಸಲು ಅನನುಕೂಲ ಉಂಟಾಯಿತೇ ಎನ್ನುವ ಪ್ರಶ್ನೆಗಳು ಮೂಡುತ್ತವೆ.
-ರಾಮನಗೌಡ ಸಿ. ಬಿರಾದಾರ
ಶಿರಕನಹಳ್ಳಿ, ಇಂಡಿ ತಾಲ್ಲೂಕು