ಗದಗ: ‘ಜಿಲ್ಲೆಯ ಕಪ್ಪತಗುಡ್ಡಕ್ಕೆ ನೀಡಿದ್ದ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶ ಸ್ಥಾನಮಾನ ವಾಪಸ್ ಪಡೆಯುವ ಮೂಲಕ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ಕುಡುಒಕ್ಕಲಿಗರ ಸಮುದಾಯ ಭವನದ ಶುಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಶುಕ್ರವಾರ ನಗರಕ್ಕೆ ಬಂದಿದ್ದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ಕಪ್ಪತಗುಡ್ಡ ಸಂರಕ್ಷಣೆಗೆ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಜೆಡಿಎಸ್ ಬೆಂಬಲವಿದೆ. ಮಠಾಧೀಶರ ಆಗ್ರಹದ ವಿರುದ್ಧ ಸರ್ಕಾರ ನಿರ್ಧಾರ ತೆಗೆದುಕೊಂಡರೆ ಕಾಂಗ್ರೆಸ್ಗೆ ಉಳಿಗಾಲವಿಲ್ಲ’ ಎಂದು ಎಚ್ಚರಿಕೆ ನೀಡಿದರು.
‘ಕಪ್ಪತಗುಡ್ಡದಲ್ಲಿರುವ ಖನಿಜ ಸಂಪತ್ತಿನ ಲೂಟಿಗೆ ಅವಕಾಶ ನೀಡಬಾರದು. ಅಗತ್ಯ ಬಿದ್ದರೆ ನಾನೇ ಹೋರಾಟ ಮಾಡುತ್ತೇನೆ’ ಎಂದರು. ‘ಮಹಾದಾಯಿ ಹೋರಾಟಗಾರರನ್ನು ಗಡೀಪಾರು ಮಾಡುವಂತಹ ಕ್ರಮ ಸರ್ಕಾರಕ್ಕೆ ಶೋಭೆ ತರುವಂಥದ್ದಲ್ಲ. ಯಾವುದೇ ಕಾರಣಕ್ಕೂ ವೈಎಸ್ವಿ ದತ್ತ ಅವರನ್ನು ಪಕ್ಷದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ. ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.