ನವದೆಹಲಿ : ನೋಟು ರದ್ದತಿ ಪರಿಣಾಮಗಳ ನಿರ್ವಹಣೆಯಲ್ಲಿ ಸರ್ಕಾರದ ಯಶಸ್ಸು ಮತ್ತು ಸೋಲುಗಳ ಫಲಿತಾಂಶ ಹೊರಬೀಳುವ ಕಾರಣ ಕೇಂದ್ರದಲ್ಲಿನ ಎನ್ಡಿಎ ಸರ್ಕಾರಕ್ಕೆ 2017–18 ನಿರ್ಣಾಯಕವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನೋಟು ರದ್ಧತಿಯ ನಂತರ ಸರ್ಕಾರದ ಬೊಕ್ಕಸಕ್ಕೆ ಹರಿದು ಬರಲಿದೆ ಎಂದು ಅಂದಾಜಿಸಲಾದ ₹2.20 ಲಕ್ಷ ಕೋಟಿಯನ್ನು ಹೇಗೆ ಬಳಸಿಕೊಳ್ಳಲಾಗುವುದು ಎಂಬುವುದರ ಮೇಲೆ ಕೇಂದ್ರ ಸರ್ಕಾರದ ಸೋಲು–ಗೆಲುವಿನ ತೀರ್ಮಾನವಾಗಲಿದೆ. ದೇಶದ ಒಟ್ಟು ಆರ್ಥಿಕ ಉತ್ಪನ್ನ (ಜಿಡಿಪಿ) ದರವನ್ನು ಶೇ 8ಕ್ಕೆ ಏರಿಸಲು ಸರ್ಕಾರ ಹೇಗೆ ಆ ಹಣವನ್ನು ವಿನಿಯೋಗಿಸುತ್ತದೆ ಎನ್ನುವುದರ ಮೇಲೆ ಎನ್ಡಿಎ ಸರ್ಕಾರದ ಯಶಸ್ಸು ನಿಂತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ನೋಟು ರದ್ದತಿಯ ತೀರ್ಮಾನ ಕೆಂದ್ರ ಸರ್ಕಾರದ ಜನಪ್ರಿಯತೆಯ ಮುಖ್ಯ ಮಾನದಂಡವಾಗಲಿದೆ. ಕಪ್ಪುಹಣ ಬಿಳಿಹಣವಾದಲ್ಲಿ ಅದರ ದೂರಗಾಮಿ ಪರಿಣಾಮವಾಗಿ ಬಡ್ಡಿದರಗಳು ಕಡಿತವಾಗಲಿವೆ. ಇದರಿಂದ ಅಂತಿಮವಾಗಿ ಜಿಡಿಪಿ ಶೇ 8ರಿಂದ ಶೇ 8.5 ಏರಿಕೆಯಾಗಲಿದೆ ಎಂದು ಕೆಪಿಎಂಜಿ ತೆರಿಗೆ ವಿಭಾಗದ ಮುಖ್ಯಸ್ಥ ಗಿರೀಶ್ ವನವಾರಿ ಅಭಿಪ್ರಾಯಪಟ್ಟಿದ್ದಾರೆ.
ನೋಟು ರದ್ದತಿಯ ನಂತರ ಹೂಡಿಕೆ ತೀವ್ರ ಕುಸಿತ ಕಂಡ ಕಾರಣ ದೇಶದ ಆರ್ಥಿಕತೆ ಕಠಿಣ ಹಾದಿಯಲ್ಲಿ ಸಾಗಿದೆ ಎಂದು ಇವೈ ಇಂಡಿಯಾ ಮುಖ್ಯ ನೀತಿ ನಿರೂಪಣಾ ಅಧಿಕಾರಿ ಡಿ.ಕೆ. ಶ್ರೀವಾತ್ಸವ್ ಹೇಳಿದ್ದಾರೆ.