ಬೆಂಗಳೂರು: ಪ್ರೇಮಿಗಳು ಪರಾರಿಯಾಗಲು ನೆರವಾದರು ಎಂಬ ಕಾರಣಕ್ಕೆ 20 ವರ್ಷದ ಯುವತಿ ಹಾಗೂ ಆಕೆಯ ತಾಯಿಯನ್ನು ಅಪಹರಿಸಿ ಮನಸೋ ಇಚ್ಛೆ ಥಳಿಸಿದ್ದಲ್ಲದೆ, ಯುವತಿಯ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಅಮಾನವೀಯವಾಗಿ ವರ್ತಿಸಿದ ಆರೋಪದ ಮೇಲೆ ಐದು ಮಂದಿಯನ್ನು ನಂದಿನಿಲೇಔಟ್ ಪೊಲೀಸರು ಬಂಧಿಸಿದ್ದಾರೆ.
ನಂದಿನಿಲೇಔಟ್ ಸಮೀಪದ ಲಕ್ಷ್ಮಿದೇವಿನಗರದ ತಾಸಿನಾ ರೆಹಮಾನ್, ಆಕೆಯ ತಮ್ಮಂದಿರಾದ ಇಮ್ರಾನ್ ಪಾಷಾ, ಜಬೀವುಲ್ಲಾ, ಈತನ ಪತ್ನಿ ಯಾಸ್ಮಿನ್ ತಾಜ್ ಹಾಗೂ ನೆರೆಮನೆಯ ಇಂದ್ರಮ್ಮ ಎಂಬುವರನ್ನು ಬಂಧಿಸಲಾಗಿದೆ. ಇವರ ವಿರುದ್ಧ ಹಲ್ಲೆ (ಐಪಿಸಿ 324), ಲೈಂಗಿಕ ದೌರ್ಜನ್ಯ (354), ಜೀವ ಬೆದರಿಕೆ (506) ಹಾಗೂ ಅಪಹರಿಸಿ ಗಾಯಗೊಳಿಸಿದ (367) ಆರೋಪಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಅನಾಗರಿಕ ವರ್ತನೆ: ‘ಆರೋಪಿಗಳ ಸಂಬಂಧಿಯೊಬ್ಬರ 15 ವರ್ಷದ ಮಗಳು, ಅಸ್ಸಾಂ ಮೂಲದ ಶೌಕತ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಈಗ ಹಲ್ಲೆಗೊಳಗಾಗಿರುವ ತಾಯಿ–ಮಗಳಿಗೆ ಆ ವಿಷಯ ಗೊತ್ತಿತ್ತು. ಟಿನ್ಫ್ಯಾಕ್ಟರಿ ಸಮೀಪದ ಅಸ್ಸಾಂ ಕಾಲೊನಿಯಲ್ಲಿ ನೆಲೆಸಿದ್ದ ಶೌಕತ್, ಪರಿಚಯದ ಕಾರಣಕ್ಕೆ ಆಗಾಗ್ಗೆ ಇವರ ಮನೆಗೆ ಬಂದು ಹೋಗುತ್ತಿದ್ದ’ ಎಂದು ತನಿಖಾಧಿಕಾರಿಗಳು ವಿವರಿಸಿದರು.
‘ಜ.16ರಂದು ಆತ, ಪ್ರೇಯಸಿಯನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದ. ಈ ಸಂಬಂಧ ಆಕೆಯ ತಾಯಿ ನಂದಿನಿಲೇಔಟ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು. ಈ ವಿಚಾರ ತಿಳಿದ ಆರೋಪಿಗಳು, ಶೌಕತ್ನ ಬಗ್ಗೆ ತಾಯಿ–ಮಗಳನ್ನು ವಿಚಾರಿಸಿದ್ದರು. ಆತನ ಮನೆ ಟಿನ್ಫ್ಯಾಕ್ಟರಿ ಬಳಿ ಇರುವುದಾಗಿ ಇವರೂ ಹೇಳಿದ್ದರು.’
‘ಅದೇ ದಿನ ರಾತ್ರಿ ಆರೋಪಿಗಳು ಶೌಕತ್ನ ಮನೆ ತೋರಿಸುವಂತೆ ಯುವತಿಯನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದರು. ಆದರೆ, ಆತನ ಮನೆಗೆ ಬೀಗ ಹಾಕಿತ್ತು.ಹೀಗಾಗಿ, ಆಕೆಯನ್ನು ವಾಪಸ್ ಮನೆಗೆ ಬಿಟ್ಟಿದ್ದರು. ಮರುದಿನ ಬೆಳಿಗ್ಗೆ ಮತ್ತೆ ಆತನನ್ನು ಹುಡುಕಲು ಬರುವಂತೆ ಕರೆದಿದ್ದರು. ಅದಕ್ಕೆ ಯುವತಿ ಒಪ್ಪಿರಲಿಲ್ಲ.’
‘ಆಗ ಆಕೆಯನ್ನು ಎಳೆದು ಕಾರಿನಲ್ಲಿ ಹಾಕಿಕೊಂಡ ಆರೋಪಿಗಳು, ಅಡ್ಡ ಬಂದ ತಾಯಿಯನ್ನೂ ಅಪಹರಿಸಿಕೊಂಡು ಪರಾರಿಯಾಗಿದ್ದರು. ಬಳಿಕ ಮನೆಯೊಂದರಲ್ಲಿ ಕೂಡಿಟ್ಟು, ಇಬ್ಬರಿಗೂ ಕಿರುಕುಳ ನೀಡಿದ್ದರು’ ಎಂದು ಮಾಹಿತಿ ನೀಡಿದರು.
ವಿವಸ್ತ್ರಗೊಳಿಸಿದರು: ‘ಶೌಕತ್ನ ಬಗ್ಗೆ ಗೊತ್ತಿಲ್ಲ ಎಂದಿದ್ದಕ್ಕೆ ನನಗೆ ಹಾಗೂ ತಾಯಿಗೆ ದೊಣ್ಣೆಯಿಂದ ಹೊಡೆದರು. ಕಬ್ಬಿಣ ಕಾಯಿಸಿ ತೊಡೆಗೆ ಬರೆ ಹಾಕಿದರು. ನನ್ನನ್ನು ವಿವಸ್ತ್ರಗೊಳಿಸಿ ಹಸಿ ಕೋಲಿನಿಂದ ಹೊಡೆದರು. ನಂತರ ಗುಪ್ತಾಂಗಕ್ಕೆ ಖಾರದ ಪುಡಿ ಎರಚಿ ಚಿತ್ರಹಿಂಸೆ ಕೊಟ್ಟರು. ಕೊನೆಗೆ ಈ ವಿಷಯ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಸಿ ಮನೆ ಹತ್ತಿರ ಬಿಟ್ಟು ಹೋದರು’ ಎಂದು ಯುವತಿ ಜ.18ರಂದು ದೂರು ಕೊಟ್ಟಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದರು.
ಆಸ್ಪತ್ರೆಯಲ್ಲಿ ಪರಿಚಯ
‘ನನ್ನ ತಾಯಿ ಆಸ್ಪತ್ರೆಯೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಾರೆ. ಶೌಕತ್ ಕೂಡ ಅದೇ ಆಸ್ಪತ್ರೆಯ ನೌಕರ. ಹೀಗಾಗಿ, ಆತನ ಪರಿಚಯವಿತ್ತು. ಹೀಗಾಗಿ, ಆತ ಮನೆಗೆ ಬಂದು ಹೋಗುತ್ತಿದ್ದ’ ಎಂದು ಯುವತಿ ಹೇಳಿಕೆ ಕೊಟ್ಟಿದ್ದಾಳೆ.
‘ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಗಂಭೀರ ಸ್ವರೂಪದ ಹಲ್ಲೆ ನಡೆದಿರುವುದು ದೃಢಪಟ್ಟಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತ್ತೆಯಾದ ಪ್ರೇಮಿಗಳು
ಶೌಕತ್ ಹಾಗೂ ಆತನ ಪ್ರೇಯಸಿ ಶುಕ್ರವಾರ ರಾತ್ರಿ ಕೆ.ಆರ್.ಪುರದಲ್ಲಿ ಪತ್ತೆಯಾಗಿದ್ದಾರೆ. ಆಕೆಯನ್ನು ಪೋಷಕರ ವಶಕ್ಕೆ ಒಪ್ಪಿಸಿರುವ ನಂದಿನಿಲೇಔಟ್ ಪೊಲೀಸರು, ಅಪಹರಣ ಹಾಗೂ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಶೌಕತ್ನನ್ನು ವಶಕ್ಕೆ ಪಡೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.