ಹರಿಹರ: ‘ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರಾವಧಿಯಲ್ಲಿ ₹40 ಕೋಟಿ ಅನುದಾನ ನೀಡಿದ್ದು, ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೊರತು ಕನಕ ಪೀಠಕ್ಕಲ್ಲ’ ಎಂದು ಕನಕ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ಸ್ಪಷ್ಟಪಡಿಸಿದರು.
ತಾಲ್ಲೂಕಿನ ಬೆಳ್ಳೂಡಿ ಕನಕ ಗುರುಪೀಠದ ಶಾಖಾ ಮಠದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಗಿನೆಲೆ ಕನಕ ಗುರುಪೀಠ ರಾಜ್ಯದ ಕಲುಬುರ್ಗಿ, ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಕಂದಾಯ ವಿಭಾಗಗಳಲ್ಲಿ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದೆ. ಮುಖ್ಯಮಂತ್ರಿ ತಮ್ಮ ಅಧಿಕಾರ ಅವಧಿಯಲ್ಲಿ ನಾಲ್ಕು ಪೀಠಗಳಿಗೆ ತಲಾ ಒಂದು ಕೋಟಿಯಂತೆ ನಾಲ್ಕು ಕೋಟಿ ಅನುದಾನ ನೀಡಿದ್ದಾರೆ. ಸರ್ಕಾರದ ಅಧೀನದಲ್ಲಿರುವ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರಕ್ಕೆ ₹40 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ತಪ್ಪು ಗ್ರಹಿಕೆಯಿಂದ ಸಮಾಜದಲ್ಲಿ ಗೊಂದಲ ಸೃಷ್ಟಿಯಾಗಿದೆ’ ಎಂದರು.
‘ಕಾಗಿನೆಲೆ ಕನಕ ಗುರುಪೀಠ ಹಾಲುಮತ ಸಮಾಜದ ಖಾಸಗಿ ಸಂಸ್ಥೆ. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಸರ್ಕಾರಿ ಸಂಸ್ಥೆ. ಇದನ್ನು ಅರ್ಥ ಮಾಡಿಕೊಳ್ಳದೇ ಹೇಳಿಕೆ ನೀಡಿದ ಕಾರಣ ಮಠದ ಭಕ್ತರಿಗೆ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಕನಕಪೀಠಕ್ಕೆ ₹40 ಕೋಟಿ ಅನುದಾನ ನೀಡಿದ್ದರೆ, ದಾಖಲೆಗಳನ್ನು ಸಮುದಾಯದ ಮುಂದೆ ಪ್ರದರ್ಶಿಸಿ ಅಥವಾ ನೀವು ಕೊಟ್ಟಿರುವ ಹೇಳಿಕೆಯನ್ನು ಸರಿಪಡಿಸಿ ಸಮಾಜದಲ್ಲಿ ಸೃಷ್ಟಿಯಾಗಿರುವ ಗೊಂದಲಕ್ಕೆ ಸ್ಪಷ್ಟನೆ ನೀಡಬೇಕು’ ಎಂದು ಒತ್ತಾಯಿಸಿದರು.