ಮಾಲೂರು: ಸಂವಿಧಾನ ಲೋಕಾರ್ಪಣೆಯಾಗಿ 7 ದಶಕ ಕಳೆದರೂ ಶೋಷಿತ ಸಮುದಾಯಗಳ ಅಭಿವೃದ್ಧಿಯಾಗಿಲ್ಲ ಸರ್ಕಾರ ಶೋಷಿತರ ಏಳಿಗೆಗೆ ಶ್ರಮಿಸಲಿ’ ಎಂದು ಆರ್ಪಿಐ ಮತ್ತು ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ವೆಂಕಟಸ್ವಾಮಿ ಆಭಿಪ್ರಾಯ ಪಟ್ಟರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ತಾಲ್ಲೂಕು ಸಮತಾ ಸೈನಿಕ ದಳ ಆಯೋಜಿಸಿದ್ದ ತಾಲ್ಲೂಕು ಮತ್ತು ಪಟ್ಟಣದ ವಿವಿಧ ಘಟಕಗಳ ಪದಾಧಿಕಾರಿಗಳ ನೇಮಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
‘ಶೋಷಿತ ,ದಲಿತ ಸಮುದಾಯ ಆಡಳಿತ ಚುಕ್ಕಾಣಿ ಹಿಡಿಯದ ಹೊರೆತು ಸಂವಿಧಾನದ ಆಶಯಗಳು ಈಡೇರಲು ಸಾಧ್ಯವಿಲ್ಲ. ರಾಜ್ಯದಲ್ಲಿನ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಹಾಗೂ ಅಲೆಮಾರಿ ಸಮುದಾಯಗಳು ಒಗ್ಗಟ್ಟಿನಿಂದ ಹೋರಾಟ ರೂಪಿಸಬೇಕಾಗಿದೆ’ ಎಂದರು.
‘ಆರ್ಪಿಐ ಪಕ್ಷ 60 ವರ್ಷ ಪೂರೈಕೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ 125 ನೇ ಜಯಂತಿಯ ಅಂಗವಾಗಿ ಜ.30 ರಂದು ಬೆಂಗಳೂರಿನಲ್ಲಿ ಬೃಹುತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.
ಸಮತಾಸೈನಿಕದಳದ ತಾಲ್ಲೂಕು ಘಟಕದ ಅಧ್ಯಕ್ಷ ಗೋವಿಂದಸ್ವಾಮಿ ನೇತ್ವದಲ್ಲಿ ತಾಲ್ಲೂಕಿನ ವಿವಿಧ ಶಾಖೆಗಳ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಮುಖಂಡರಾದ ರಾಜಪ್ಪ, ಸಂತೋಷ್, ರಾಘವೇಂದ್ರ, ರಘುನಾಥ್, ಲೋಕೇಶ್, ವೆಂಕಟೇಶ್, ಭಾಸ್ಕರ್, ನಾಗೇಶ್, ಸೋಮು, ಸುನಿಲ್ ಕುಮಾರ್, ಪಾಪಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.