ಬಂಗಾರಪೇಟೆ: ‘ಮಾನವ ಸಂಪನ್ಮೂಲ ಸದ್ಬಳಕೆಗೆ ಸರ್ಕಾರ ಕಾರ್ಯ ಯೋಜನೆ ರೂಪಿಸದ ಕಾರಣ ಯುಶಕ್ತಿ ದುರ್ಬಳಕೆಯಾಗುತ್ತಿದೆ’ ಎಂದು ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾ(ಎಸ್ಎಫ್ಐ) ರಾಜ್ಯ ಘಟಕ ಅಧ್ಯಕ್ಷ ವಿ.ಅಮರೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಲಯನ್ಸ್ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ 6ನೇ ವಿದ್ಯಾರ್ಥಿ ಸಮ್ಮೇಳನದಲ್ಲಿ ಮಾತನಾಡಿದ ಅವರು, ಶಿಕ್ಷಣ ಪಡೆದಿರುವ ಯುವಕರಿಗೆ ಉದ್ಯೋಗ ಇಲ್ಲದೆ ಸಮಾಜಘಾತುಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಇದಕ್ಕೆ ಸರ್ಕಾರವೇ ಹೊಣೆಯಾಗಿದೆ. ಸಮಾನ ಶಿಕ್ಷಣ ಎನ್ನುವುದು ಬರಿ ಘೋಷಣೆಗೆ ಸೀಮಿತವಾಗಿದೆ. ಬಡ ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ದೇಶದ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ’ ಎಂದರು.
‘ದೇಶದಲ್ಲಿ 10ಲಕ್ಷ , ರಾಜ್ಯದಲ್ಲಿ 36ಸಾವಿರ ಶಿಕ್ಷಕರ ಹುದ್ದೆ ಖಾಲಿ ಇವೆ. 101 ಪದವಿ ಪೂರ್ವ ಕಾಲೇಜುಗಳಿಗೆ ಸ್ವಂತ ಕಟ್ಟಡವಿಲ್ಲ. ಅಲ್ಲದೆ ಉಪನ್ಯಾಸಕರ ಕೊರತೆಯಿದೆ. ಇಂಥ ಸ್ಥಿತಿಯಲ್ಲಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಸಿಗಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದರು.
‘ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಇಲ್ಲದೆ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ಸಾಗಿಸಲು ಜನರು ಗುಳೆ ಹೋಗುವುದು ಅನಿವಾರ್ಯವಾಗಿದೆ. ಇದೆಲ್ಲಾ ರಾಜಕಾರಣಿಗಳ ಕಣ್ಣಮುಂದೆಯೇ ನಡೆಯುತ್ತಿದೆಯಾದರೂ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ’ ಎಂದು ಹೇಳಿದರು.
ಸಮುದಾಯ ಸಂಘಟನೆ ರಾಜ್ಯ ಘಟಕ ಅಧ್ಯಕ್ಷ ಅಚ್ಚುತನ್ ಮಾತನಾಡಿ,‘ಯುವಕರು ದುಶ್ಚಟಗಳನ್ನು ತೊರೆದು ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಚಿಂತನೆ ನಡೆಸಬೇಕು. ಸರ್ಕಾರ ಶಿಕ್ಷಣ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು’ಎಂದರು.
ಸಭೆಯಲ್ಲಿ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ, ಎಸ್ಎಫ್ಐ ಜಿಲ್ಲಾ ಘಟಕದ ಅಧ್ಯಕ್ಷ ವಾಸುದೇವರೆಡ್ಡಿ, ತಾಲ್ಲೂಕು ಘಟಕ ಅಧ್ಯಕ್ಷ ಅರ್ಶೀತ, ಕಸಾಪ ತಾಲ್ಲೂಕು ಘಟಕ ಅಧ್ಯಕ್ಷ ಬದರಿನಾಥ್,ಗಾಯಿತ್ರಿ, ಅ.ನ.ಹರೀಶ್, ಶಿವಪ್ಪ ವಿಜಿಕುಮಾರಿ, ನಿಖೀಲ್, ಹರ್ಷಿತಾ, ಮೋಹನ್ಗೌಡ, ಬಾಲರಾಜು, ಮೋಹನ್ ಬಾಬು, ಯಶ್ವಥ್, ಅನಿಲ್ ಕುಮಾರ್, ಕೃಷ್ಣಮೂರ್ತಿ ಇತರರಿದ್ದರು.