ಶಿವಮೊಗ್ಗ: ಸಾಗರ ತಾಲ್ಲೂಕು ಶಿರಿವಂತೆಯ ತ್ರಿಪುರಾಂತಕೇಶ್ವರ ಸಭಾ ಭವನದ ಆವರಣದಲ್ಲಿ ಜ. 22 ರಂದು ಬೆಳಿಗ್ಗೆ 10ಕ್ಕೆ ಮಲೆನಾಡುಗಿಡ್ಡ ತಳಿ ರಾಸುಗಳ ಮೇಳವನ್ನು ಕರ್ನಾಟಕ ಪಶು ವೈದ್ಯಕೀಯ, ಬೀದರ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗ ಪಶು ವೈದ್ಯಕೀಯ ಮಹಾವಿದ್ಯಾಲಯ, ಹಾಲು ಒಕ್ಕೂಟ ಹಾಗೂ ಮಲೆನಾಡು ಗಿಡ್ಡ ತಳಿ ಗೋಸಂವರ್ಧನ ಸಂಸ್ಥೆ ಏರ್ಪಡಿಸಿದೆ.
ಮಲೆನಾಡು ಗಿಡ್ಡ ಎಂಬುದು ವಿಶಿಷ್ಟ ಜಾನುವಾರು ತಳಿ. ಈ ತಳಿಯ ರಾಸುಗಳನ್ನು ಉಳಿಸುವ ಸಂಬಂಧ ಈ ಮೇಳ ಆಯೋಜಿಸಲಾಗಿದೆ ಎಂದು ಪಶು
ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ.ಕೆ.ಸಿ. ವೀರಣ್ಣ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಮೇಳದಲ್ಲಿ ಸಾಗರ, ತೀರ್ಥಹಳ್ಳಿ ಮತ್ತು ಸೊರಬ ತಾಲ್ಲೂಕುಗಳಿಂದ ಉತ್ತಮ 50ಕ್ಕಿಂತ ಹೆಚ್ಚು ರಾಸುಗಳು ಬರಲಿವೆ. ಹಸು, ಹೋರಿ, ಕರು ವಿಭಾಗಗಳಲ್ಲಿ ಉತ್ತಮ ರಾಸುಗಳಿಗೆ ಬಹುಮಾನವೂ ಇದೆ ಎಂದರು.
ಕಾರ್ಯಕ್ರಮವನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಉದ್ಘಾಟಿಸುವರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಂಸತ್ ಸದಸ್ಯ ಬಿ.ಎಸ್.ಯಡಿಯೂರಪ್ಪ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಭಾಗವಹಿಸುವರು. ಶಾಸಕ ಮಧು ಬಂಗಾರಪ್ಪ ಅಧ್ಯಕ್ಷತೆ ವಹಿಸುವರು ಎಂದು ಅವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಹಾಯಕ ನಿರ್ದೇಶಕ ಡಾ.ಎಸ್. ಕಲ್ಲಪ್ಪ, ಡಾ.ಪ್ರಕಾಶ್ ನಡು, ಡಾ.ತಿರುಮಲೇಶ್, ಡಾ.ನಾಗಭೂಷಣ್ ಉಪಸ್ಥಿತರಿದ್ದರು.