(ಶಿಶುವಿನಹಾಳ ಸಂತ ಶರೀಫ ಶಿವಯೋಗಿಗಳ ವೇದಿಕೆ)ಶಿಗ್ಗಾವಿ: ‘ಆಧುನಿಕ ಯುಗದಲ್ಲಿ ಇಂದು ಮಹಿಳೆ ಪುರುಷರಷ್ಟೇ ಸಮಾನ ಎಂದು ಹೇಳಿದರೂ ಸಹ ಲಿಂಗರಾಜಕಾರಣ ನಡೆಯುತ್ತಲೇ ಇದೆ. ಹೀಗಾಗಿ ಮಹಿಳೆಯರ ಪರಿಪೂರ್ಣ ಬೆಳವಣಿಗೆ ಕಾಣುತ್ತಿಲ್ಲ’ ಎಂದು ಮಂಡ್ಯದ ರಂಗಕರ್ಮಿ ಡಾ.ಸುಜಾತಾ ಅಕ್ಕಿ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಶುಕ್ರವಾರ 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ‘ಸ್ತ್ರೀ ಅಂದರೆ ಅಷ್ಟೇ ಸಾಕೆ...? ಗೋಷ್ಠಿ –5’ರಲ್ಲಿ ‘ಮಹಿಳೆ ಮತ್ತು ಸಮಕಾಲೀನ ಸಮಸ್ಯೆಗಳು’ ಗಳ ಕುರಿತು ಅವರು ಮಾತನಾಡಿದರು.
ಆಶಯ ನುಡಿ ನುಡಿದ ಡಾ.ಲತಾ ನಿಡಗುಂದಿ, ‘ಸಮಾಜದಲ್ಲಿ ಬೇರೂರಿದ್ದ ಭ್ರಷ್ಟಾಚಾರ ಅಂದಿನ ದಿನಗಳಲ್ಲಿಯೇ ಹೋಗಲಾಡಿಸಲು ಆಯ್ದಕ್ಕಿ ಲಕ್ಕಮ್ಮ ಮಾದರಿಯಾಗಿದ್ದರು. ಬೆಳವಡಿ ಮಲ್ಲಮ್ಮ ಮಹಿಳಾ ಸೈನ್ಯ ಕಟ್ಟಿ ಮಿಂಚಿದ್ದರು.ಕಿತ್ತೂರು ಚನ್ನಮ್ಮ ಬ್ರಿಟಿಷರ್ ವಿರುದ್ಧ ಹೋರಾಡಿದ ವೀರ ಮಹಿಳೆ’ ಎಂದರು.
‘ಸಾಹಿತ್ಯ ಮತ್ತು ಲಿಂಗರಾಜ ರಾಜಕಾರಣ’ ಎಂಬ ವಿಷಯ ಕುರಿತು ಮಾತನಾಡಿದ ಬೆಂಗಳೂರಿನ ಪ್ರಾಧ್ಯಾಪಕ ಡಾ.ಬಿ.ಎ. ಅನ್ನದಾನೇಶ, ‘ಸಾಹಿತ್ಯಕವಾಗಿ ಹೆಣ್ಣನ್ನು ನೋಡುವ ಸ್ಥಿತಿ ಬೇರೆಯಿದೆ. ಆದರೂ, ಆಧುನಿಕ ದಿನಗಳಲ್ಲಿ ಹೆಣ್ಣನ್ನು ನೋಡು ದೃಷ್ಟಿಕೋನ ಇನ್ನೂ ಬದಲಾಗಬೇಕಿದೆ’ ಎಂದರು.
ಬ್ಯಾಡಗಿ ಪ್ರಾಧ್ಯಾಪಕಿ ಚನ್ನಮ್ಮ ಕೋರಿಶೆಟ್ಟರ ‘ಕೌಟುಂಬಿಕ ವ್ಯವಸ್ಥೆಯೊಳಗೆ ಮಹಿಳೆ’ ಕುರಿತು ಮಾತನಾಡಿದರು.
ಬ್ಯಾಡಗಿ ಸಾಹಿತಿ ಸಂಕಮ್ಮ ಸಂಕನಣ್ಣವರ ಅಧ್ಯಕ್ಷತೆ ವಹಿಸಿ ಮಾತನಾಡಿ,‘ ಮಹಿಳೆಯರು ಮುಕ್ತರಾದರೆ ಮಾತ್ರ ಪುರುಷರಿಗೆ ಇಂದು ದಾರಿ ಕಾಣಲು ಸಾಧ್ಯವಿದೆ. ಹೀಗಾಗಿ ಮಹಿಳೆ ತನ್ನ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬೇಕು’ ಎಂದರು.
ಚನ್ನಮ್ಮ ನಂಜಯ್ಯನವರಮಠ, ಸುಶೀಲಕ್ಕ ಪಾಟೀಲ, ಶೈಲಜಾ ಪಾಟೀಲ,ಮಂಗಳಾ ಹೆಸರೂರ, ಗಿರಿಜಾ ಹೆಸರೂರ ಮತ್ತಿತರರು ಇದ್ದರು.
ರತ್ನಮ್ಮ ಸ್ವಾಗತಿಸಿದರು. ಶಕುಂತಲಾ ಕೋಣನವರ ನಿರೂಪಿಸಿದರು. ಪ್ರೀಯಾಂಕ ಪಾಟೀಲ ವಂದಿಸಿದರು.