ಕುಕನೂರು: ‘ಬಯಲು ಬಹಿರ್ದೆಸೆ ಮುಕ್ತ ಮಾಡಲು ಎಲ್ಲರೂ ಸಿದ್ಧರಾಗಬೇಕು’ ಎಂದು ದೇಹಲಿಯಿಂದ ಆಗಮಿಸಿದ ಫೀಡ್ಬ್ಯಾಕ್ ಪೌಂಡೇಷನ್ ತರಬೇತುದಾರ ಧರ್ಮರಾಜ ತಿಳಿಸಿದರು.
ಮಸಬಹಂಚಿನಾಳ ಗ್ರಾಮದಲ್ಲಿ ಸ್ವಚ್ಛ ಭಾರತ ಮಿಷನ್ ಯೋಜನೆ ಹಾಗೂ ಗ್ರಾಮ ಪಂಚಾಯಿತಿ ಕಾರ್ಯಾಲಯದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯೋಜನೆಯ ಜಿಲ್ಲಾ ಸಮಾಲೋಚಕ ಮಾರುತಿ ಮಾತನಾಡಿ, ‘ಶುದ್ಧ ಕುಡಿಯುವ ನೀರು, ಚರಂಡಿ ಸ್ವಚ್ಛತೆ ಬೇಕಿದ್ದರೆ ಮೊದಲು ಬಯಲು ಶೌಚಕ್ಕೆ ಹೋಗುವುದನ್ನು ಕೈಬಿಡಿ ಎಂದು ಹೇಳಿದರು.
ತಾಲ್ಲೂಕು ಸಮಾಲೋಚಕಿ ಬಸಮ್ಮ ಮಾತನಾಡಿ,‘ಬಯಲು ಬಹಿರ್ದೆಸೆಯಿಂದ ಗ್ರಾಮ ಕೊಳಕಾಗಿ, ರೋಗಗಳಿಗೆ ತುತ್ತಾಗಬೇಕಾಗುತ್ತದೆ’ ಎಂದು ಎಚ್ಚರಿಸಿದರು. ಪಿಡಿಒ ಶರಣಪ್ಪ ಕೆಳಗಿನಮನಿ ಮಾತನಾಡಿ,‘ಗ್ರಾಮವನ್ನು ತ್ಯಾಜ್ಯಮುಕ್ತ ಮಾಡಿದರೆ ಬಯಲು ಶೌಚ ತಡೆಗಟ್ಟಿದಂತೆ’ ಎಂದರು.
ಗ್ರಾ.ಪಂ ಅಧ್ಯಕ್ಷೆ ಮಂಜುಳಾ ದೊಡ್ಡಮನಿ, ಉಪಾಧ್ಯಕ್ಷ ಬೀರಪ್ಪ ಕರಿಗಾರ, ಈಶಪ್ಪ ಅಂಗಡಿ, ಕಪ್ಪತಪ್ಪ ಅಂಗಡಿ, ಮುದ್ದಪ್ಪ ನಾಗರಳ್ಳಿ, ತಿಮ್ಮಣ್ಣ ದೇವರಮನಿ, ಶಿವಪ್ಪ ಆಚಾರ ಇದ್ದರು.