ಹುಮನಾಬಾದ್: ಆರೋಗ್ಯವಂತ ಯುವಕರಿಂದ ಮಾತ್ರ ರಾಷ್ಟ್ರದ ಪ್ರಗತಿ ಸಾಧ್ಯ ಎಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಅಲ್ಲಂಪ್ರಭು ಗುಡ್ಡದ ಹೇಳಿದರು.
ಸ್ಥಳೀಯ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಏಕಾಗ್ರತೆ, ರಾಷ್ಟ್ರಪ್ರೇಮ ಮೈಗೂಡಿ ಸಿಕೊಳ್ಳುವುದರ ಜೊತೆಗೆ ದುಶ್ಚಟ, ಸೋಮಾರಿತನ ತೊರೆದು ಚಾರಿತ್ರ್ಯ, ಕಾಯಕ ನಿಷ್ಠರಾಗಿ ಸ್ವಾವಲಂಬಿ ಮತ್ತು ಸ್ವಾಭಿಮಾನ ಜೀವನ ಸಾಗಿಸಬೇಕು. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ಬಳಸದೇ ಅತ್ಯಂತ ಗೌರದಿಂದ ಕಾಣಬೇಕು.
ಇನ್ಸ್ಪೆಕ್ಟರ್ ದತ್ತಾತ್ರೇಯ ಕಾರ್ನಾಡ್ ಮಾತನಾಡಿ, ‘ಯುವಕರು ವ್ಯರ್ಥಕಾಲಹರಣ ಮಾಡದೇ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವತ್ತ ಚಿತ್ತ ಹರಿಸಬೇಕು. ಉತ್ತಮ ಸ್ಥಾನಮಾನ ಗಿಟ್ಟಿಸಿಕೊಂಡು ಜನ್ಮಭೂಮಿ, ಹೆತ್ತ ಮಾತೆ, ವಿದ್ಯೆಧಾರೆ ಎರೆದ ಗುರುಗಳನ್ನು ಅತ್ಯಂತ ಗೌರವದಿಂದ ಕಾಣುವ ಮನೋಭಾವ ಮೈಗೂಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಯುವಕರು ವಿವೇಕಾನಂದದ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯ ಪ್ರಾಚಾರ್ಯ ವೈ.ಆರ್.ನಂದಿಹಳ್ಳಿ ಹೇಳಿದರು.
ಎಬಿವಿಪಿ ವಿಭಾಗೀಯ ಸಂಚಾಲಕ ರೇವಣದಸಿದ್ದ ಜಾಡರ, ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪಪ್ರಾಚಾರ್ಯ ಕಾಶಿನಾಥ ಕೂಡ್ಲಿ ಮಾತನಾಡಿದರು. ಎಬಿವಿಪಿ ಪ್ರಮುಖ ರಾದ ಪ್ರಶಾಂತ ಪಾಟೀಲ, ಶಿವಶಂಕರ ಸ್ವಾಮಿ, ಲೋಕೇಶ ಮೋಳಕೇರಿ, ಸಿದ್ದು ಬಾವುಗೆ. ತಾಲ್ಲೂಕು ಸಂಚಾಲಕ ಮಹಾದೇವ ಗವಾರೆ, ವಿನೋದ ಶೆಳಗೆ, ಪ್ರವೀಣ, ಮಧುಸೂಧನರೆಡ್ಡಿ, ಕಾಂತು ಸಜ್ಜನ್ ಇದ್ದರು.
ಇದಕ್ಕೂ ಮುನ್ನ ವೀರಭದ್ರೇಶ್ವರ ಕೈಗಾರಿಕಾ ತರಬೇತಿ ಕೇಂದ್ರದಿಂದ ಪ್ರಮುಖ ಬೀದಿಗಳ ಮೂಲಕ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜುವರೆಗೆ ನಡೆಸಲಾದ ಜಾಥಾದಲ್ಲಿ ವಿವಿಧ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.