ಕಾರವಾರ: ಇಲ್ಲಿನ ಸುಭಾಷ್ ವೃತ್ತದಲ್ಲಿ ಶುಕ್ರವಾರ ನಡೆದ ‘ಅಭಿರಂಗ’ ಮಕ್ಕಳ ನಾಟಕೋತ್ಸವ ಮತ್ತು ಬೀದಿ ನಾಟಕದಲ್ಲಿ ಬಾಲ ಕಲಾವಿದರು ತಮ್ಮ ಪ್ರತಿಭೆ ಮೆರೆದರು. ಉತ್ತಮ ಅಭಿನಯದ ಮೂಲಕ ನೆರೆದಿದ್ದವರ ಗಮನಸೆಳೆದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಜಿಲ್ಲಾ ಬಾಲಭವನ ಸೊಸೈಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಈ ನಾಟಕೋತ್ಸವಕ್ಕೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್. ಚಂದ್ರಶೇಖರ ನಾಯಕ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರಲು ಇಂತಹ ನಾಟಕ ಪ್ರದರ್ಶನಗಳು ಪೂರಕವಾಗಿವೆ. ಬೀದಿ ನಾಟಕಗಳ ಮೂಲಕ ಮಕ್ಕಳಲ್ಲಿ ಸಾಮಾಜಿಕ ಕಳಕಳಿಯನ್ನು ಮೂಡಿಸಲು ಸಹ ಸಾಧ್ಯವಾಗಲಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುವ ಅಗತ್ಯವಿದೆ ಎಂದು ಹೇಳಿದರು.
ಮಕ್ಕಳ ನಾಟಕೋತ್ಸವ ಮತ್ತು ಬೀದಿ ನಾಟಕದಲ್ಲಿ 5 ರಿಂದ 16 ವರ್ಷದ ಮಕ್ಕಳು ತಮ್ಮ ಅಮೋಘ ಪಾತ್ರಾಭಿನ ಯದಿಂದ ಜನರನ್ನು ರಂಜಿಸಿದರು. ‘ಸತ್ಯವೇ ನಮ್ಮ ತಾಯಿ ತಂದೆ’ ಎಂಬ ಗೋವಿನ ಹಾಡಿನ ನೃತ್ಯ ರೂಪಕ ಮತ್ತು ಸೈನಿಕರ ತ್ಯಾಗ ಬಲಿದಾನ ಕುರಿತ ದೇಶಭಕ್ತಿ ನೃತ್ಯ ರೂಪಕಗಳು ಮನಸೂರೆಗೊಂಡವು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಜೇಂದ್ರ ಬೇಕಲ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಲಕ್ಷ್ಮಣ ರಾಠೋಡ್ ಉಪಸ್ಥಿತರಿದ್ದರು.