ಇಸ್ಲಾಮಾಬಾದ್: ಭಾರತ ಜಮ್ಮು–ಕಾಶ್ಮೀರದಲ್ಲಿನ ಜಲವಿದ್ಯುತ್ ಯೋಜನೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು ಎಂದು ಪಾಕಿಸ್ತಾನದ ಸಂಸದೀಯ ಸಮಿತಿ ಹೇಳಿದೆ. ಯೋಜನೆಗಳ ಕುರಿತು ಭಾರತ ಮತ್ತು ವಿಶ್ವಬ್ಯಾಂಕ್ ಪಾಕ್ ಜತೆ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು ಎಂದಿದೆ.
ಶುಕ್ರವಾರ ನಡೆದ ವಿದೇಶಾಂಗ ವ್ಯವಹಾರ ಹಾಗೂ ಜಲ ಮತ್ತು ವಿದ್ಯುತ್ ಸಚಿವರ ಸಭೆಯಲ್ಲಿ ಈ ಕುರಿತು ನಿರ್ಣಯಕೈಗೊಳ್ಳಲಾಗಿದೆ.
ಭಾರತ ವಿದ್ಯುತ್ ಯೋಜನೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಸಭೆಯಲ್ಲಿ ಒಮ್ಮತದ ಮೂಲಕ ಜಂಟಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಜಮ್ಮು ಕಾಶ್ಮೀರದಲ್ಲಿನ ಕಿಶನ್ಗಂಗಾ ಮತ್ತು ರಾಟ್ಲೆ ಯೋಜನೆಗಳಿಗೆ ವಿರೋಧ ವ್ಯಕ್ತಪಡಿಸಿರುವ ಪಾಕಿಸ್ತಾನ, ಈ ಯೋಜನೆಗಳ ಕುರಿತು ವಿಶ್ವಸಂಸ್ಥೆ ಹಾಗೂ ಭಾರತ ಮಾಹಿತಿ ವಿನಿಮಯ ಮಾಡಿಕೊಳ್ಳಬೇಕು. ಅಂತರರಾಷ್ಟ್ರೀಯ ಜಲ ಸಮಸ್ಯೆ ಇತ್ಯರ್ಥಕ್ಕೆ ನ್ಯಾಯಾಲಯವನ್ನು ಸ್ಥಾಪಿಸಬೇಕು ಎಂದು ಹೇಳಿದೆ.
ಸಿಂಧು ನದಿ ಜಲ ಒಪ್ಪಂದ (ಐಡಬ್ಲ್ಯುಟಿ) ಜಾರಿಗೆ ತರುವ ಜವಾಬ್ದಾರಿ ವಿಶ್ವಬ್ಯಾಂಕ್ ಮೇಲಿದೆ. ಈ ವಿಚಾರವಾಗಿ ವಿಶ್ವಬ್ಯಾಂಕ್ ತಕ್ಷಣ ಕಾರ್ಯೋನ್ಮುಖವಾಗಬೇಕು ಎಂದು ಪಾಕಿಸ್ತಾನ ಒತ್ತಾಯಿಸಿದೆ.