ನವದೆಹಲಿ: ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನಿನ್ನೆ ಚಂಡೀಗಢದ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ಕರೆದಾಗ ಮಾಧ್ಯಮದವರಿಗೆ ಅಲ್ಲಿ ಅಚ್ಚರಿ ಕಾದಿತ್ತು. ಸುದ್ದಿಗೋಷ್ಠಿಗೆ ಬಂದ ಸಿಧು ಕೈಯಲ್ಲಿ ಪೂಜಾ ಪೆಟ್ಟಿಗೆಯೊಂದಿತ್ತು.
ಆ ಪುಟ್ಟ ಪೆಟ್ಟಿಗೆಯಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹಗಳು. ಅದಕ್ಕೆ ಹೂ ಸಮರ್ಪಿಸಿ ಪೂಜೆ ಮಾಡಿದ ನಂತರವೇ ಸಿಧು ಸುದ್ದಿಗೋಷ್ಠಿ ಆರಂಭಿಸಿದ್ದರು.
ಶಿವ ಭಕ್ತನಾದ ಸಿಧು, ಸದಾ ಈ ಪೂಜಾ ಪೆಟ್ಟಿಗೆಯನ್ನು ತನ್ನೊಂದಿಗೆ ಒಯ್ಯುತ್ತಾರೆ. ಸುದ್ದಿಗೋಷ್ಠಿ ಮುಗಿದ ನಂತರವೇ ಪೂಜಾ ಪೆಟ್ಟಿಗೆಯನ್ನು ಮುಚ್ಚಿದ್ದು, ಪೂಜಾ ಪೆಟ್ಟಿಗೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬಾದಲ್ ಕುಟಂಬದ ವಿರುದ್ಧ ವಾಗ್ದಾಳಿ ನಡೆಸಿದ ಸಿಧು, ಪಂಜಾಬ್ ಸರ್ಕಾರದ ನೀತಿಗಳು ಬಾದಲ್ ಅವರ ವ್ಯವಹಾರಗಳಿಗೆ ಪೂರಕವಾಗಿರುವಂತದ್ದಾಗಿದೆ ಎಂದು ಆರೋಪಿಸಿದ್ದಾರೆ.