ಬೆಂಗಳೂರು: ಓಲಾ ಮತ್ತು ಉಬರ್ ಸೇರಿದಂತೆ ಆ್ಯಪ್ ಆಧಾರಿತ ಕ್ಯಾಬ್ ಕಂಪೆನಿಗಳು ಕ್ಯಾಬ್ ಚಾಲಕರ ಮೇಲೆ ಎಸಗುತ್ತಿರುವ ದೌರ್ಜನ್ಯವನ್ನು ಖಂಡಿಸಿ ಇದೇ 23 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಚಾಲಕರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಲಿದೆ.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಜಿ.ನಾರಾಯಣಸ್ವಾಮಿ ಮಾತನಾಡಿ ‘ಓಲಾ ಮತ್ತು ಉಬರ್ ಸೇರಿದಂತೆ ಅನೇಕ ಸಂಸ್ಥೆಯು ವಿಶೇಷ ಭತ್ಯೆ ನೀಡುವುದಾಗಿ ಈ ಕ್ಯಾಬ್ ಚಾಲಕರ ನಡುವೆ ಒಪ್ಪಂದ ಮಾಡಿಕೊಂಡಿವೆ. ಆದರೆ, ಇದುವರೆಗೂ ಯಾವುದೇ ಭತ್ಯೆ ನೀಡಿಲ್ಲ. ಇದನ್ನು ಪ್ರಶ್ನಿಸಿದರೆ ಬೌನ್ಸರ್ಗಳಿಂದ ಚಾಲಕರ ಮೇಲೆ ಹಲ್ಲೆ ಮಾಡಿಸುತ್ತಾರೆ. ಚಾಲಕ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ನೂತನ ವಾಹನಗಳ ಜೊತೆ ಒಪ್ಪಂದ ಮಾಡಿಕೊಂಡು ಹಲವು ವರ್ಷಗಳಿಂದ ಈ ಸಂಸ್ಥೆಯ ಅಡಿಯಲ್ಲಿ ಸೇವೆಸಲ್ಲಿಸಿದ ಚಾಲಕರನ್ನು ಕೆಲಸದಿಂದ ತೆಗೆಯುತ್ತಿದ್ದಾರೆ. ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ಚಾಲಕರನ್ನು ಹಿಂಸೆಗೆ ಒಳಪಡಿಸುತ್ತಿವೆ. ಈ ವಿಷಯ ಕುರಿತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕ್ರಮ ಕೈಗೊಂಡಿಲ್ಲ’ ಎಂದರು.
‘ಹೊಸ ಲೀಸಿಂಗ್ ವಾಹನಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿ ಚಾಲಕರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು. ಚಾಲಕರ ಸಮಸ್ಯೆಗಳನ್ನು ಆಲಿಸಲು ಗ್ರಾಹಕರ ಕುಂದು ಕೊರತೆಗಳ ವಿಭಾಗವನ್ನು ಸ್ಥಾಪಿಸಬೇಕು. ಸಾರಿಗೆ ಇಲಾಖೆಯ ನಿಯಮದ ಅನ್ವಯದಂತೆ ದರ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.