ಬೆಂಗಳೂರು: ‘ಜಮೀರ್ ಅಹಮದ್ ಹಾಗೂ ಅವರ ಸಹಚರರು ನಮ್ಮ ತೋಟಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ದಾಂದಲೆ ಮಾಡಿದ್ದಾರೆ’ ಎಂದು ಆರೋಪಿಸಿ ಶೋಭಾದೇವಿ ಎಂಬುವರು ಸೋಲದೇವನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
‘ಗುಡ್ಡದಹಳ್ಳಿಯಲ್ಲಿರುವ ತೋಟಕ್ಕೆ ಜ. 6ರಂದು ಜೆಸಿಬಿ ಯಂತ್ರ ಸಮೇತ ಹೋಗಿದ್ದ ಆರೋಪಿಗಳು, ಅಲ್ಲಿಯ ಜಾಗವನ್ನು ಸಮತಟ್ಟು ಮಾಡಿದ್ದಾರೆ. ಈ ಬಗ್ಗೆ ಶೋಭಾದೇವಿ ಅವರು ಕೊಟ್ಟಿದ್ದ ದೂರಿನನ್ವಯ ಜಮೀರ್ ಅಹಮದ್, ಸೀನಾ ಅಲಿಯಾಸ್ ಶ್ರೀನಿವಾಸ್ ಹಾಗೂ ಬಾಬು ಎಂಬುವರ ವಿರುದ್ಧ ಫೆ. 12ರಂದು ಎಫ್ಐಆರ್ ದಾಖಲಿಸಿಕೊಂಡಿದ್ದೇವೆ’ ಎಂದು ಉತ್ತರ ವಿಭಾಗದ ಡಿಸಿಪಿ ಲಾಬೂರಾಮ್ ತಿಳಿಸಿದರು.
‘ದೂರಿನಲ್ಲಿ ಜೆಡಿಎಸ್ ಮುಖಂಡ ಜಮೀರ್ ಅಹಮದ್ ಎಂದು ಉಲ್ಲೇಖಿಸಿದ್ದಾರೆ. ಜತೆಗೆ ಘಟನೆಯ ಮಾಹಿತಿಗಳು ನಿಖರವಾಗಿಲ್ಲ. ಹೀಗಾಗಿ ದೂರುದಾರರಿಂದ ಮತ್ತಷ್ಟು ಮಾಹಿತಿ ಪಡೆಯಬೇಕಿದೆ.’
‘ತೋಟದಲ್ಲಿಯ ಬೆಳೆಯನ್ನು ಸಹ ಆರೋಪಿಗಳು ನಾಶ ಮಾಡಿದ್ದಾರೆ. ಜತೆಗೆ ಅಲ್ಲಿಯ ಕೆಲಸಗಾರರಿಗೂ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ. ಆದರೆ, ಘಟನೆ ವೇಳೆ ಜಮೀರ್ ಅಹಮದ್ ಸ್ಥಳದಲ್ಲಿ ಇರಲಿಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಉಳಿದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ನಿಖರ ಮಾಹಿತಿ ತಿಳಿಯಲಿದೆ’ ಎಂದು ಹೇಳಿದರು.