ರಾಜ್ಯದಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟಲು ಬಾಲ್ಯ ವಿವಾಹ ಕಾಯ್ದೆಗೆ ತಿದ್ದುಪಡಿ ತರಲು ನಿರ್ಧರಿಸಿರುವ ರಾಜ್ಯ ಸರ್ಕಾರದ ಕ್ರಮ ಸ್ವಾಗತಾರ್ಹ.
ದೇಶದಾದ್ಯಂತ ಬಾಲ್ಯ ವಿವಾಹಗಳು ಇನ್ನೂ ಮುಂದುವರಿದಿರುವುದು ಆತಂಕಕಾರಿ. ರಾಜ್ಯ ಸರ್ಕಾರ ಗಂಡು ಹಾಗೂ ಹೆಣ್ಣಿಗೆ ವಿವಾಹವಾಗಲು ಕನಿಷ್ಠ ವಯೋಮಾನ ನಿಗದಿಪಡಿಸಿದ್ದರೂ ಅದನ್ನು ಉಲ್ಲಂಘಿಸಿ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಅನೇಕ ವೇಳೆ ಹಿರಿಯ ರಾಜಕಾರಣಿಗಳ, ಮಠಾಧೀಶರ ಹಾಗೂ ಇನ್ನಿತರ ಗಣ್ಯರ ಸಮ್ಮುಖದಲ್ಲೇ ಬಾಲ್ಯ ವಿವಾಹ ನಡೆಯುತ್ತಿದ್ದರೂ ಈ ಮಹಾನುಭಾವರು ತಮಗೇನೂ ಗೊತ್ತಿಲ್ಲದ ರೀತಿ ವರ್ತಿಸುತ್ತಾರೆ.
ಕೆಲವು ಸಂದರ್ಭಗಳಲ್ಲಿ ಪೊಲೀಸರ ನೇತೃತ್ವದಲ್ಲೇ ಬಾಲ್ಯ ವಿವಾಹ ನಡೆಯುವುದುಂಟು. ಇಂತಹ ಬಹುತೇಕ ಪ್ರಕರಣಗಳಲ್ಲಿ ಗಂಡು ಮತ್ತು ಹೆಣ್ಣಿನ ನಿಜವಾದ ವಯಸ್ಸನ್ನು ಮರೆಮಾಚಿ ವಿವಾಹ ಮಾಡುವುದರಿಂದ ಪೊಲೀಸರು ಹಾಗೂ ಸರ್ಕಾರಿ ಅಧಿಕಾರಿಗಳು ಮೋಸಹೋಗಬಹುದು. ಆದ್ದರಿಂದ ಮದುವೆಗೆ ಮುಂಚೆ ಗಂಡು ಮತ್ತು ಹೆಣ್ಣಿನ ಸರಿಯಾದ ವಯಸ್ಸಿನ ಬಗ್ಗೆ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪರಿಶೀಲಿಸಬೇಕು.
ಒಂದು ವೇಳೆ ಖೊಟ್ಟಿ ಪ್ರಮಾಣ ಪತ್ರ ನೀಡಿದ್ದರೆ ಸಂಬಂಧ ಪಟ್ಟವರ ವಿರುದ್ಧ ಪ್ರಕರಣ ದಾಖಲಿಸಬೇಕು. ಸರ್ಕಾರದ ಜೊತೆ ಸಾರ್ವಜನಿಕರೂ ಸಹಕರಿಸಿದರೆ ಬಾಲ್ಯ ವಿವಾಹಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ಸಾಧ್ಯವಿದೆ.
-ಕೆ.ವಿ.ವಾಸು, ಮ್ಯೆಸೂರು