ಸುತ್ತೂರು ಹಿರಿಯ ಶ್ರೀಗಳ ಲಿಂಗೈಕ್ಯ
ಮೈಸೂರು, ಜ. 22– ನಂಜನಗೂಡು ತಾಲ್ಲೂಕು ಸುತ್ತೂರು ಶ್ರೀ ವೀರಸಿಂಹಾಸನ ಮಠದ ಹಿರಿಯ ಜಗದ್ಗುರುಗಳಾದ ಶಿವಯೋಗಿ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಗಳು ಇಂದು ಮದ್ಯಾಹ್ನ 3 ಗಂಟೆಯಲ್ಲಿ ಮೈಸೂರಿನಲ್ಲಿ ಲಿಂಗೈಕ್ಯರಾದರು.
ನಂಜನಗೂಡು ತಾಲ್ಲೂಕು ಸುತ್ತೂರು ಮಠದಲ್ಲಿ ಸೋಮವಾರ ಬೆಳಿಗ್ಗೆ 10 ಗಂಟೆಗೆ ಜಗದ್ಗುರುಗಳ ಪವಿತ್ರ ದೇಹದ ಶಿವಸಾಯುಜ್ಯ ನಿಕ್ಷೇಪ ನಡೆಯುತ್ತದೆ.
ಶ್ರೀಗಳು ಮಠದ ಅಧಿಕಾರ ಸ್ವೀಕರಿಸಿದಾಗ ಕೇವಲ ಹದಿನಾರು ವರ್ಷದವರಾಗಿದ್ದರು. 1902 ರಲ್ಲಿ ಪಟ್ಟಾಧಿಕಾರ ನಡೆದ ಬಳಿಕ ಮಠದ ಗುರು ಪರಂಪರೆಯ ಹಾದಿಯಲ್ಲಿ ಕಾರ್ಯನಿರತರಾದರು. ಚಿಕ್ಕವಯಸ್ಸಿನಲ್ಲೇ ಅಧಿಕಾರ ಸ್ವೀಕರಿಸಿದರೂ, ತಮ್ಮ ಪಾಂಡಿತ್ಯ, ಜ್ಞಾನ ವೃದ್ಧಿಗಾಗಿ ಸಾಧನೆ ಮಾಡಿದರಲ್ಲದೆ ಶ್ರೀ ಮಠದ ಜೀರ್ಣೋದ್ಧಾರದ ಕಡೆಗೆ ತೀವ್ರ ಆಸಕ್ತಿ ವಹಿಸಿ, ಮಠವು ಪ್ರವರ್ಧಮಾನಕ್ಕೇರಲು ಕಾರಣರಾದರು.
ಮೈಸೂರಿನಲ್ಲಿ ವೇದ, ಸಂಸ್ಕೃತ, ಜ್ಯೋತಿಷ್ಯ ಪಾಠಶಾಲೆಗಳನ್ನು ಸ್ಥಾಪಿಸಿ, ಆಧ್ಯಾತ್ಮಿಕ ರಂಗದ ಉನ್ನತಿಗೆ ಶ್ರಮಿಸಿದರಲ್ಲದೆ, ಆಧುನಿಕ ಯುಗದ ವೇಗವನ್ನು ಲಕ್ಷಿಸಿ, ಮೈಸೂರು ನಗರದಲ್ಲಿ ವಿದ್ಯಾರ್ಥಿ ನಿಲಯಗಳನ್ನೂ, ಪ್ರಾಥಮಿಕ ಶಾಲೆಯಿಂದ ಹಿಡಿದು ಎಂಜಿನಿಯರಿಂಗ್ ಶಿಕ್ಷಣದವರೆಗೆ ಶಿಕ್ಷಣ ಸಂಸ್ಥೆಗಳನ್ನೂ ಸ್ಥಾಪಿಸಿದರು.