ಬೆಂಗಳೂರು/ಮೈಸೂರು: ನಂಜನಗೂಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಕಳಲೆ ಕೇಶವಮೂರ್ತಿ ಅವರನ್ನೇ ಕಣಕ್ಕಿಳಿಸಲು ಇಲ್ಲಿ ಭಾನುವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
‘ಪಕ್ಷದ ಕೋರ್ ಕಮಿಟಿಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗುವುದು. ಒಂದು ವೇಳೆ ಸ್ಪರ್ಧಿಸುವುದು ಎಂದಾದರೆ, ಪಕ್ಷದಿಂದ ಕೇಶವಮೂರ್ತಿಯವರೇ ಕಣಕ್ಕಿಳಿಯಲಿದ್ದಾರೆ’ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.
ಇಂದು ಸಭೆ: ಜೆಡಿಎಸ್ ಪ್ರಮುಖರ ಸಭೆ ಸೋಮವಾರ ಬೆಳಿಗ್ಗೆ ನಡೆಯಲಿದೆ.
ಎಚ್.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ನೂತನ ಕಚೇರಿ ಉದ್ಘಾಟನೆ ಮತ್ತು ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ನೂತನವಾಗಿ ನಿರ್ಮಾಣ ವಾಗುತ್ತಿರುವ ಜೆಡಿಎಸ್ ಕಚೇರಿಯ ಪೂಜೆಗೆ ಶಾಸಕ ಎಚ್.ಡಿ.ರೇವಣ್ಣ ಅವರು, ಫೆ. 3ಕ್ಕೆ ಮುಹೂರ್ತ ನಿಗದಿ ಮಾಡಿದ್ದಾರೆ.
ಪೂಜೆಯ ಬಳಿಕ ಬೇರೊಂದು ದಿನ ಪಕ್ಷದ ಕಚೇರಿಯ ಉದ್ಘಾಟನೆ ನಡೆಯಲಿದೆ. ಹೊಸ ಕಚೇರಿಗೆ ‘ಜೆ.ಪಿ.ಸದನ’ ಎಂದು ನಾಮಕರಣ ಮಾಡಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.