ಬಳ್ಳಾರಿ: ‘ಕೇಂದ್ರ ಸರ್ಕಾರದ ‘ಸರಕು ಮತ್ತು ಸೇವಾ ತೆರಿಗೆ ಮಸೂದೆ’ (ಜಿ.ಎಸ್.ಟಿ)ಯಲ್ಲಿನ ಲೋಪ–ದೋಷಗಳನ್ನು ಸರಿಪಡಿಸುವಂತೆ ಕೋರಲಾಗಿದೆ’ ಎಂದು ಪರೋಕ್ಷ ತೆರಿಗೆಗಳ ಸಮಿತಿಯ ಅಧ್ಯಕ್ಷ ಎನ್. ಮಧುಕರ ಹಿರೇಗಂಗೆ ತಿಳಿಸಿದರು.
‘ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆ, ತೆರಿಗೆಗಳ ಸಮಿತಿ ಸಹಯೋಗದೊಂದಿಗೆ ‘ಪರಿಷ್ಕೃತ ಮಾದರಿ ಸರಕು ಮತ್ತು ಸೇವಾ ತೆರಿಗೆ ಮಸೂದೆ’ ಎನ್ನುವ ಪುಸ್ತಕ ಪ್ರಕಟಿಸಲಾಗಿದೆ. ಹಾಲಿ ಹಾಗೂ ಹಿಂದಿನ ಮಸೂದೆಯಲ್ಲಿನ ಅಂಶಗಳ ಕುರಿತು ವ್ಯತ್ಯಾಸ ತಿಳಿಸಲಾಗಿದೆ. ಮಸೂದೆಯ ಅಂಶಗಳನ್ನು ಸಣ್ಣ ಪುಸ್ತಕಗಳಲ್ಲಿ ಮುದ್ರಿಸಿ, ಸಾಮಾನ್ಯ ಜನರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ನೀಡಲಾಗುವುದು’ ಎಂದು ಅವರು ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಮಸೂದೆ ಜಾರಿಯಿಂದಾಗಿ ಉದ್ದಿಮೆದಾರರಲ್ಲಿ ಶಿಸ್ತು, ಸಂಯಮ ಮೂಡಲಿದೆ. ಪಾರದರ್ಶಕ ವ್ಯವಸ್ಥೆ ಜಾರಿಗೊಳ್ಳಲಿದೆ. ಭ್ರಷ್ಟಾಚಾರ ತಡೆಗೆ ಇದು ಸಹಕಾರಿಯಾಗಲಿದೆ. ದೇಶದ ಬಡತನ ನಿರ್ಮೂಲನೆಗೂ ಇದು ಉಪಯುಕ್ತವಾಗಲಿದೆ’ ಎಂದರು.
ತರಬೇತಿ: ‘ದೇಶದ ವಿವಿಧ ರಾಜ್ಯಗಳ ಲೆಕ್ಕಪರಿಶೋಧಕರಿಗೆ ಈ ಮಸೂದೆ ಕುರಿತು ಸೂಕ್ತ ತರಬೇತಿ ನೀಡಲಾಗುವುದು. ಅಂದಾಜು 50 ಸಾವಿರಕ್ಕೂ ಹೆಚ್ಚು ಲೆಕ್ಕಪರಿಶೋಧಕರಿಗೆ ತರಬೇತಿ ನೀಡುವ ಗುರಿ ಇದೆ’ ಎಂದರು.