ನವದೆಹಲಿ: ‘ಪಂಚವಾರ್ಷಿಕ ಯೋಜನೆ ಪದ್ಧತಿಯನ್ನು ಕೈಬಿಡಲು ಸರ್ಕಾರ ಉದ್ದೇಶಿಸಿದ್ದು, ಬದಲಿಗೆ ತ್ರೈವಾರ್ಷಿಕ (3ವರ್ಷಗಳ) ಯೋಜನೆ ಪದ್ಧತಿಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ನೀತಿ ಆಯೋಗವು ಈಗಾಗಲೇ ಈ ಸಂಬಂಧ ಎಲ್ಲಾ ಪ್ರಕ್ರಿಯೆಗಳನ್ನು ಪೂರೈಸಿದೆ’ ಎಂದು ಮೂಲಗಳು ಹೇಳಿವೆ.
‘ಫೆ.1ರಂದು ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಮೊದಲ ತ್ರೈವಾರ್ಷಿಕ ಯೋಜನೆಯನ್ನು ಪ್ರಕಟಿಸಲಿದ್ದಾರೆ. ಈ ಯೋಜನೆ ಈ ವರ್ಷವೇ ಜಾರಿಯಾಗಲಿದ್ದು, 2020ಕ್ಕೆ ಕೊನೆಯಾಗಲಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.
ಕೃಷಿ ಮತ್ತು ತಯಾರಿಕಾ ವಲಯದಲ್ಲಿ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸಲು ಈ ಯೋಜನೆಯಲ್ಲಿ ಒತ್ತು ಕೊಡಲಾಗಿದೆ. ಜತೆಗೆ ಕೃಷಿ ಕಾರ್ಮಿಕರು ಮತ್ತು ರೈತರ ಆದಾಯವನ್ನು 2022ರ ವೇಳೆಗೆ ಎರಡು ಪಟ್ಟು ಹೆಚ್ಚಿಸುವ ಸಲುವಾಗಿ ವಿವಿಧ ಕ್ರಮಗಳು ಈ ಯೋಜನೆ ಅಡಿ ಜಾರಿಯಾಗಲಿವೆ. ಅಲ್ಲದೆ ನೋಟು ರದ್ದತಿಯಿಂದ ಪರಿಣಾಮ ಎದುರಿಸಿದ ಎಲ್ಲಾ ವಲಯಗಳ ಸ್ಥಿತಿ ಸುಧಾರಣೆಗೆ ಕ್ರಮಗಳನ್ನು ಸೂಚಿಸಲಾಗಿದೆ.