ಬೆಂಗಳೂರು: ‘ಸ್ವಚ್ಛ ಭಾರತ ಅಭಿಯಾನ’ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ‘ರೋಟರಿ ಬೆಂಗಳೂರು’ ವತಿಯಿಂದ ನಗರದಲ್ಲಿ ಭಾನುವಾರ ಕಾರು ರ್ಯಾಲಿ ನಡೆಯಿತು.
ರೋಟರಿ ಸದಸ್ಯರು ಸೇರಿದಂತೆ 43 ಕುಟುಂಬದವರು ಪ್ರತ್ಯೇಕ ಕಾರುಗಳ ಮೂಲಕ ರ್್ಯಾಲಿಯಲ್ಲಿ ಭಾಗವಹಿಸಿದ್ದರು.
ತುಮಕೂರು ರಸ್ತೆಯಿಂದ ಆರಂಭವಾದ ರ್ಯಾಲಿಯು ಚಿಕ್ಕಜಾಲ ಮೂಲಕ ವಿಮಾನ ನಿಲ್ದಾಣ ರಸ್ತೆವರೆಗೆ ಸಾಗಿತು.
ಸುಮಾರು 67 ಕಿ.ಮೀ ದೂರ ಸಂಚರಿಸಿದ ಕಾರುಗಳ ಮೇಲೆ ‘ಸ್ವಚ್ಛ ಭಾರತ, ಹಸಿರು ಭಾರತ’ ಹಾಗೂ ‘ನಿಜವಾದ ಸ್ವಚ್ಛ ಭಾರತವನ್ನು ನಿರ್ಮಿಸಿ’ ಎಂಬ ಘೋಷಣೆಯುಳ್ಳ ಫಲಕಗಳನ್ನು ಹಾಕಲಾಗಿತ್ತು.
‘ಇದೇ ಮೊದಲ ಬಾರಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಕುಟುಂಬದೊಂದಿಗೆ ಭಾಗವಹಿಸಿದ್ದೇನೆ. ಜನ ಸಹ ತಮ್ಮ ಸುತ್ತಮುತ್ತ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಂಡರೆ ನಮ್ಮ ಉದ್ದೇಶ ಈಡೇರುತ್ತದೆ’ ಎಂದು ಖಾಸಗಿ ಕಂಪೆನಿ ಉದ್ಯೋಗಿ ಕೃಪಾ ಶೆಟ್ಟಿ ಹೇಳಿದರು.
‘ಜನರಲ್ಲಿ ಸ್ವಚ್ಛತೆ ಹಾಗೂ ಸಮುದಾಯಗಳ ಅಭಿವೃದ್ಧಿಗೆ ‘ಟೆಕ್ ಮಿಷನ್’ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಅದಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದೇವೆ’ ಎಂದು ರೋಟರಿ ಬೆಂಗಳೂರು ಅಧ್ಯಕ್ಷ ಶೋಭಾ ನಾಗಸಂದ್ರ ತಿಳಿಸಿದರು.