ಬೆಂಗಳೂರು: ‘ಬೆಂಗಳೂರು ನಿರ್ಮಾತೃ ಕೆಂಪೇಗೌಡ ಅವರ ಸೊಸೆ ಲಕ್ಷ್ಮಿದೇವಿ ಪುತ್ಥಳಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಚೇರಿ ಆವರಣದಲ್ಲಿ ಸ್ಥಾಪನೆ ಮಾಡಲಾಗುವುದು’ ಎಂದು ಮೇಯರ್ ಜಿ.ಪದ್ಮಾವತಿ ಅವರು ಹೇಳಿದರು.
ಭಾರತೀಯ ಅಕಾಡೆಮಿ ಆಫ್ ಲಿಂಗ್ವಿಸ್ಟಿಕ್ ಆ್ಯಂಡ್ ಕಮ್ಯುನಿಕೇಷನ್ (ಬಿಎಎಲ್ಸಿ) ಸಂಸ್ಥೆ ಪುರಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 154ನೇ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ, ಸಂಕಲ್ಪ–2017 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದ್ದಾರೆ ನಿಜ. ಆದರೆ, ಇದಕ್ಕೆ ಸ್ಫೂರ್ತಿ ಅವರ ಸೊಸೆ ಮಹಾನ್ ತ್ಯಾಗಮಯಿ ಲಕ್ಷ್ಮಿದೇವಿ. ಬೆಂಗಳೂರು ಕಟ್ಟಲು ಅವರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಕೆಂಪೇಗೌಡರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ಲಕ್ಷ್ಮಿದೇವಿ ಅವರ ತ್ಯಾಗದ ಬಗ್ಗೆ ಯಾರೂ ಮಾತಾಡಲ್ಲ. ಹೆಚ್ಚಿನ ಜನರಿಗೆ ಇವರ ಬಗ್ಗೆ ತಿಳಿದೇ ಇಲ್ಲ’ ಎಂದರು.