ಪಾಂಡವಪುರ: ಭಾಷೆ ನಾಶವಾದರೆ ಮನುಷ್ಯ ಸಂಬಂಧ, ಸಂಸ್ಕೃತಿ, ಪರಂಪರೆ ನಾಶವಾಗುತ್ತದೆ. ಪ್ರತಿ ಮನೆ ಯಲ್ಲಿ ‘ಮಮ್ಮಿ- ಡ್ಯಾಡಿ’ ಸಂಸ್ಕೃತಿ ಹೋಗಿ ‘ಅಪ್ಪ- ಅವ್ವ’ ಸಂಸ್ಕೃತಿ ಬೆಳೆಯ ಬೇಕಾಗಿದೆ ಎಂದು ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಹೇಳಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶನಿವಾರ ನಡೆದ 6ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹಳ್ಳಿ ಮತ್ತು ಭಾಷೆಯನ್ನು ರಕ್ಷಣೆ ಮಾಡಬೇಕಾಗಿದೆ. ಭಾಷೆ, ಜಾನಪದ, ಮನುಷ್ಯ ಸಂಬಂಧಗಳು ಉಳಿದಿರು ವುದೇ ನಮ್ಮ ಹಳ್ಳಿಗಳಲ್ಲಿ. ಹಾಗಾಗಿ, ಹಳ್ಳಿ ಉಳಿದರಷ್ಟೇ ಕೃಷಿ, ರೈತ, ಆಹಾರ ಭದ್ರತೆ ಉಳಿಯಲು ಸಾಧ್ಯ ಎಂದರು.
ಸಂಸದ ಸಿ.ಎಸ್.ಪುಟ್ಟರಾಜು, ಪ್ರಾಧ್ಯಾಪಕ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿದರು. ಸಮ್ಮೇಳನಾಧ್ಯಕ್ಷೆ ಡಾ.ಜಯಲಕ್ಷ್ಮಿ ಸೀತಾಪುರ, ಸಿ.ಕೆ.ರವಿಕುಮಾರ್, ಉಪಾಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಬೀರಶೆಟ್ಟಹಳ್ಳಿ ರಮೇಶ್, ಎನ್.ಚಲುವೇ ಗೌಡ, ಎಂ.ಅಂಕೇಗೌಡ ಇದ್ದರು.
ನಾಗರಾಜೇಗೌಡ, ಮರಿಜೋಸೆಫ್, ಮಂಜುಲಾ, ಮುರುಗನ್, ಎಚ್.ಜಿ. ಗೋವಿಂದರಾಜ್, ಚನ್ನಮಾದೇಗೌಡ, ಗೌರಮ್ಮ ಮರಿಗೌಡ, ಸಿ.ಎಸ್.ಸುಪ್ರೀತ್, ತಿಮ್ಮೇಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ 16 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು.
ಚಿನಕುರಳಿಯ ಪಿ.ನಿವೇದಿತಾ ಅವರ ಯೋಗಾ ಪ್ರದರ್ಶನ ಹಾಗೂ ಕ್ಯಾತನಹಳ್ಳಿ ಕೌಸ್ತುಭ ಅವರು ಪ್ರದರ್ಶಿಸಿದ ‘ಭರತ ನಾಟ್ಯ’ ನೃತ್ಯ ಎಲ್ಲರ ಗಮನ ಸೆಳೆಯಿತು.
ಬೆಂಗಳೂರಿನ ಅಜೀವಿಕ ತಂಡವು ಪ್ರದರ್ಶಿಸಿದ ‘ಪೋಸ್ಟ್ ಬಾಕ್ಸ್ ನಂ.9’ ನಾಟಕ ಮೆಚ್ಚುಗೆಗೆ ಪಾತ್ರವಾಯಿತು.