ಮಡಿಕೇರಿ: ಹುತಾತ್ಮರ ದಿನಾಚರಣೆ ಅಂಗವಾಗಿ, ಜ.30ರಂದು ಸೈರನ್ ಕೇಳಿದ ಕೂಡಲೇ ಪ್ರತಿಯೊಬ್ಬರೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಎರಡು ನಿಮಿಷ ಮೌನ ವಹಿಸಬೇಕು ಎಂದು ಸರ್ವೋದಯ ಸಮಿತಿ ಅಧ್ಯಕ್ಷ ಟಿ.ಪಿ. ರಮೇಶ್ ಮನವಿ ಮಾಡಿದರು.
ಹುತಾತ್ಮರ ದಿನಾಚರಣೆ ಆಚರಿಸುವ ಸಂಬಂಧ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅಧ್ಯಕ್ಷತೆಯಲ್ಲಿ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಅಂದು ವಾಹನ ಚಾಲಕರು, ಪಾದ ಚಾರಿಗಳು, ಅಂಗಡಿಯವರು, ಸರ್ಕಾರಿ ಕಚೇರಿಗಳ ಸಿಬ್ಬಂದಿ, ಬಸ್ ನಿಲ್ದಾಣ, ಶಾಲಾ–-ಕಾಲೇಜುಗಳಲ್ಲಿ ಹೀಗೆ ಪ್ರತಿಯೊಂದು ಕಡೆಗಳಲ್ಲಿ ಎದ್ದು ನಿಂತು ಎರಡು ನಿಮಿಷ ಮೌನ ವಹಿಸಿ ಹುತಾ ತ್ಮರಿಗೆ ಗೌರವ ಸೂಚಿಸಬೇಕು ಎಂದು ಹೇಳಿದರು.
ಜಿಲ್ಲಾ ಖಜಾನೆಯಲ್ಲಿರುವ ಗಾಂಧೀಜಿ ಚಿತಾಭಸ್ಮವನ್ನು ಪ್ರತಿ ವರ್ಷವೂ ಹೊರತೆಗೆದು ಜಿಲ್ಲಾಡಳಿತ ಹಾಗೂ ಸರ್ವೋದಯ ಸಮಿತಿ ಸದಸ್ಯರ ನೇತೃತ್ವದಲ್ಲಿ ನಗರದ ಗಾಂಧಿ ಮಂಟಪಕ್ಕೆ ತೆರಳಿ ಮೌನ ವಹಿಸಲಾಗುತ್ತಿತ್ತು. ಈಗ ಜಿಲ್ಲಾ ಖಜಾನೆಯ ಕಚೇರಿ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರವಾಗಿರುವುದರಿಂದ ಜಿಲ್ಲಾ ಖಜಾನೆಯಿಂದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದ ಮೂಲಕ ಮೆರವಣಿಗೆ ಸಾಗಿ ಗಾಂಧಿ ಮಂಟಪಕ್ಕೆ ತೆರಳಲಾಗುವುದು ಎಂದರು.
ನಗರದ ಗಾಂಧಿ ಮಂಟಪ ಬಳಿ ರಾಜ್ಘಾಟ್ ಮಾದರಿಯಲ್ಲಿ ಗಾಂಧಿ ಸ್ಮಾರಕ ನಿರ್ಮಿಸುವ ಸಂಬಂಧ ಈಗಾ ಗಲೇ ನೀಲ ನಕಾಶೆ ತಯಾರಿಸಲಾಗಿದ್ದು, ₹1ಕೋಟಿ ಬಿಡುಗಡೆಗೆ ಮುಖ್ಯಮಂತ್ರಿಯವರಲ್ಲಿ ಕೋರಲಾಗಿದೆ. ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು ಸಹ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ಹುತಾತ್ಮರ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರರ ಪಾತ್ರವನ್ನು ತಿಳಿಸು ವಂತಹ ಸರ್ವಧರ್ಮ ಪ್ರಾರ್ಥನೆ ಮಾಡಲು ವಿದ್ಯಾರ್ಥಿಗಳಿಗೆ ಅಗತ್ಯ ತರ ಬೇತಿ ನೀಡುವಂತೆ ಸಲಹೆ ನೀಡಿದರು.
ಪೌರಾಯುಕ್ತೆ ಬಿ. ಶುಭ, ಸರ್ವೋದಯ ಸಮಿತಿ ಸದಸ್ಯ ಕೋಡಿ ಚಂದ್ರಶೇಖರ, ಎಸ್.ಪಿ. ವಾಸುದೇವ, ಅಂಬೆಕಲ್ ಕುಶಾಲಪ್ಪ, ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ಸಂಘಟಕ ದಮಯಂತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಳ್ಳಯ್ಯ ಇದ್ದರು.