ನವಲಗುಂದ: ಜೈಲ್ ಭರೋ ಹಾಗೂ ಗಡೀಪಾರು ಚಳವಳಿಗಾಗಿ ರೈತರು ಸೋಮವಾರ ನೀಡಿರುವ ಬಂದ್ ಕರೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದೆ.
ನಗರದಲ್ಲಿ ಪೊಲೀಸರನ್ನು ನಿಯೋಜಿಸಿದ್ದು, ಪೂರ್ವಭಾವಿಯಾಗಿ ಪ್ರಮುಖ ಬೀದಿಗಳಲ್ಲಿ ಭಾನುವಾರ ಸಂಜೆ ಪಥ ಸಂಚಲನ ನಡೆಸಲಾಯಿತು. ‘ನಿಮ್ಮೊಂದಿಗೆ ನಾವಿದ್ದೇವೆ’ ಎಂಬ ಘೋಷ ವಾಕ್ಯದೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.
ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ರಸ್ತೆಗಳಲ್ಲಿ ನಾಕಾ ಬಂದಿ ಹಾಕಲಾಗಿದೆ. ದುಷ್ಕರ್ಮಿಗಳು ನಗರಕ್ಕೆ ಬಂದು ಗಲಾಟೆ ಮಾಡುವ ಸಾಧ್ಯತೆಗಳ ಕಾರಣ ಹೊರ ಊರಿನಿಂದ ಬರುವ ಖಾಸಗಿ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮತ್ತೊಂದು ನೋಟಿಸ್ ಜಾರಿ: ಸುಪ್ರೀಂ ಕೋರ್ಟ್ ಆದೇಶದಂತೆ ಸಾರ್ವಜನಿಕರಿಗೆ ಅನಾನುಕೂಲವಾಗುವ ಸಭೆ, ಸಮಾರಂಭ, ಮೆರವಣಿಗೆ, ಹರತಾಳಕ್ಕೆ ಅವಕಾಶ ಇಲ್ಲ.ಪ್ರತಿಭಟನೆ ಅಥವಾ ಮೆರವಣಿಗೆ ಸಂದರ್ಭದಲ್ಲಿ ಜೀವಹಾನಿ, ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವಾದರೆ ಮಹದಾಯಿ, ಕಳಸಾ ಬಂಡೂರಿ ರೈತ ಹೋರಾಟ ಒಕ್ಕೂಟವನ್ನು ಹೊಣೆ ಮಾಡಲಾಗುವುದು ಎಂದು ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಲೋಕನಾಥ ಹೆಬಸೂರ ಅವರಿಗೆ ಪೊಲೀಸ್ ಇಲಾಖೆ ನೋಟಿಸ್ ನೀಡಿದೆ.
ನೋಟಿಸ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಲೋಕನಾಥ ಹೆಬಸೂರ, ‘ನಾವು ಕುಡಿಯುವ ನೀರಿಗಾಗಿ 532 ದಿನದಿಂದ ಹೋರಾಟ ನಡೆಸುತ್ತಿದ್ದೇವೆ. ಪೊಲೀಸರ ಒದೆ ತಿಂದರೂ ಹೋರಾಟ ಮುಂದುವರಿದಿದೆ. ಹೋರಾಟ ನಿರಂತರವಾಗಿ ನಡೆಯುವುದು. ಪೊಲೀಸರ ಬೆದರಿಗೆ ಹೆದರುವುದಿಲ್ಲ’ ಎಂದು ತಿಳಿಸಿದ್ದಾರೆ.
ಹೋರಾಟದಲ್ಲಿ ಪಾಲ್ಗೊಳ್ಳದಂತೆ ಗ್ರಾಮ ಗ್ರಾಮಗಳಿಗೆ ಹೋಗಿ ರೈತರನ್ನು ಹೆದರಿಸುತ್ತಿದ್ದಾರೆ. ಪೊಲೀಸರ ದೌರ್ಜನ್ಯದಿಂದ ನೊಂದಿರುವ ರೈತರು ಕೋರ್ಟ್ ಕಚೇರಿ ಅಲೆಯುವುದು ಬೇಕಾಗಿಲ್ಲ. ಅದಕ್ಕಾಗಿ ನಾವೇ ಸ್ವತಃ ಜೈಲ್ ಭರೋ ಮತ್ತು ಗಡೀಪಾರು ಮಾಡುವಂತೆ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಹೆಬಸೂರ ತಿಳಿಸಿದರು.