ಬಾಗಲಕೋಟೆ: ಪದ್ಯ ಕಂಠಪಾಠವಾಗಿದ್ದರೂ ಅದನ್ನು ತಪ್ಪಿಲ್ಲದೇ ಬರೆಯಲು ಬಾರದ ಸ್ಥಿತಿ, ಶಿಕ್ಷಕ ಬೋರ್ಡ್ ಮೇಲೆ ಬರೆದಿದ್ದನ್ನು ತಪ್ಪಾಗಿ ಬರೆದುಕೊಂಡಿದ್ದ ವಿದ್ಯಾರ್ಥಿ, ವಿಜ್ಞಾನ ಶಿಕ್ಷಕರು ಆಗಷ್ಟೇ ಹೇಳಿಕೊಟ್ಟಿದ್ದ ಅಂತರ್ದಹನ, ಬಹಿರ್ದಹನ ಎಂಜಿನ್ಗಳ ಬಗ್ಗೆ ವಿವರಣೆ ನೀಡಲು ಬಾರದ ಸ್ಥಿತಿ..
ಇಲ್ಲಿನ ನವನಗರದ 43ನೇ ಸೆಕ್ಟರ್ನ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಆರಂಭವಾದ ವಿಶೇಷ ಬೋಧನಾ ಕೇಂದ್ರಕ್ಕೆ ಹಾಜರಾದ ವಿವಿಧ ಶಾಲೆಗಳ ಎಸ್ಎಸ್ಎಲ್ಸಿ ಮಕ್ಕಳ ಪರಿಸ್ಥಿತಿ ಇದು.
ಜಿಲ್ಲಾ ಪಂಚಾಯ್ತಿ ಉಪಕಾರ್ಯದರ್ಶಿ ಅಮರೇಶ ನಾಯಕ ಖುದ್ದಾಗಿ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಮಾತನಾಡಿಸಿ ಬುದ್ಧಿಮತ್ತೆ ಪರಿಶೀಲಿಸಿದರು. ಅಲ್ಲಿ ನಡೆದ ವಿಶೇಷ ಬೋಧನಾ ತರಗತಿಗಳಿಗೆ ಕಾಳಿದಾಸ ಶಾಲೆ, ಆದರ್ಶ ವಿದ್ಯಾಲಯ, ಶಾರದಾಂಬ ಪ್ರೌಢಶಾಲೆ ಸೇರಿದಂತೆ ಅದೇ ಶಾಲೆಯ ವಿದ್ಯಾರ್ಥಿಗಳೂ ಹಾಜರಾಗಿದ್ದರು. ತಲಾ 25ರಂತೆ ಎರಡು ತರಗತಿಗಳಲ್ಲಿ 50 ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಯಿತು.
ಶಾಲೆಗೆ ಭೇಟಿ ನೀಡಿದ ವೇಳೆ ಮಕ್ಕಳು ಹಾಗೂ ಶಿಕ್ಷಕರಿಗೆ ಕಿವಿಮಾತು ಹೇಳಿದ ಅಮರೇಶ ನಾಯಕ, ‘ನಿಮಗೆ ವಿಶೇಷ ತರಗತಿ ಏಕೆ ಮಾಡಲಾಗುತ್ತಿದೆ. ನೀವೇಕೆ ಇಲ್ಲಿಗೆ ಆಯ್ಕೆ ಆಗಿದ್ದೀರಿ. ಇಷ್ಟು ದಿನ ಏಕೆ ಕಲಿಯಲಿಲ್ಲ. ನೀವು ದಡ್ಡರಿದ್ದೀರಿ ಎಂದು ಇಲ್ಲಿಗೆ ಆಯ್ಕೆ ಮಾಡಿಲ್ಲ. ಬದಲಾಗಿ ಕಲಿಕೆ ನಿಗದಿತ ಮಟ್ಟದಲ್ಲಿ ಆಗಿಲ್ಲ ಎಂದು ಅವಕಾಶ ನೀಡಲಾಗಿದೆ. ಕೇವಲ ಪಾಸ್ ಮಾರ್ಕ್ಸ್ಗೆ ಓದದೇ ಹೆಚ್ಚಿನ ಅಂಕ ಪಡೆಯುವತ್ತ ಗಮನಹರಿಸುವಂತೆ’ ಮಕ್ಕಳನ್ನು ಪ್ರೋತ್ಸಾಹಿಸಿದರು.
‘ಮಕ್ಕಳಿಗೆ ಹೊಸದಾಗಿ ಕಲಿಸುತ್ತಿದ್ದೇವೆ ಎಂಬ ಭಾವನೆಯಿಂದ ಪಾಠ ಮಾಡಿ. ಆದರೆ ಇಲ್ಲಿ ಬಂದವರಿಗೆ ಎಬಿಸಿಡಿ ಗೊತ್ತಿಲ್ಲ ಎಂಬ ಮನೋಭಾವ ಇಟ್ಟುಕೊಳ್ಳಬೇಡಿ’ ಎಂದು ಶಿಕ್ಷಕರಿಗೆ ಸಲಹೆ ನೀಡಿದ ಅಮರೇಶ ನಾಯಕ, ‘ ಹೆಚ್ಚು ಹೋಂವರ್ಕ್ ಕೊಡಿ. ಇಲ್ಲಿ ಅನುತ್ತೀರ್ಣರಾದವರನ್ನು ಬಿಡಬೇಡಿ. ಅವರಿಂದ ಹೆಚ್ಚು ಹೆಚ್ಚು ಅಭ್ಯಾಸ ಮಾಡಿಸಿ’ ಎಂದು ತಿಳಿಸಿದರು. ಸರ್ಕಾರಿ ಪ್ರೌಢಶಾಲೆಗೆ ಭೇಟಿ ನೀಡುವ ಮುನ್ನ ಅವರು ನವನಗರದ ಅಂಜುಮನ್ ಶಾಲೆಗೂ ಭೇಟಿ ನೀಡಿ ಅಲ್ಲಿ ವಿಶೇಷ ತರಗತಿಯಲ್ಲಿ ಮಕ್ಕಳ ಕಲಿಕೆಯನ್ನು ಪರಿಶೀಲಿಸಿದರು.
ಪಾಠ ಆರಂಭ...
ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯದರ್ಶಿ ವಿಕಾಸ ಸುರೋಳಕರ ಅವರು ವಿಶೇಷ ಅಸ್ಥೆಯಿಂದ ಮಿಷನ್–100 ಹೆಸರಿನಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ವಿಶೇಷ ತರಗತಿಗೆ ವ್ಯವಸ್ಥೆ ಮಾಡಿದ್ದಾರೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರೊಂದಿಗೆ ಚರ್ಚಿಸಿ ವರ್ಕ್ಬುಕ್ ಸಿದ್ಧಗೊಳಿಸಿದ್ದು, ಮೊದಲ ದಿನವೇ ಎಲ್ಲಾ ಮಕ್ಕಳಿಗೂ ವರ್ಕ್ಬುಕ್ಗಳನ್ನು ನೀಡಿ ಪಾಠ ಆರಂಭಿಸಲಾಯಿತು. 87 ವಿಶೇಷ ಬೋಧನಾ ಕೇಂದ್ರ ಆರಂಭಿಸಲಾಗಿದೆ. 180 ಶಾಲೆಗಳ ಮಕ್ಕಳು ವಿಶೇಷ ತರಗತಿಗೆ ಹಾಜರಾಗುತ್ತಿದ್ದಾರೆ. 4268 ಮಕ್ಕಳಿಗೆ ಲಾಭವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.