ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬರುವ ಅಧಿವೇಶನದಲ್ಲಿ ಹೊಸ ತಾಲ್ಲೂಕು ಘೋಷಣೆಗೆ ಮುಂದಾಗಿರುವುದರಿಂದ ಪಕ್ಷಭೇದ ಮರೆತು ಹೆಬ್ರಿ ತಾಲ್ಲೂಕು ಘೋಷಿಸುವಂತೆ ಮುಖ್ಯಮಂತ್ರಿಯನ್ನು ನಿಯೋಗದೊಂದಿಗೆ ಭೇಟಿ ಮಾಡಿ ಒತ್ತಡ ಹೇರಲಾಗುವುದು ಎಂದು ತಾಲ್ಲೂಕು ಹೋರಾಟ ಸಮಿತಿ ಗೌರವಾಧ್ಯಕ್ಷ, ಮಾಜಿ ಶಾಸಕ ಹೆಬ್ರಿ ಗೋಪಾಲ ಭಂಡಾರಿ ಹೇಳಿದರು.
ಅವರು ಬುಧವಾರ ಪ್ರಸ್ತಾವಿತ ಹೆಬ್ರಿ ತಾಲ್ಲೂಕನ್ನು ಘೋಷಣೆ ಮಾಡುವಂತೆ ಒತ್ತಾಯಿಸಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹೋರಾಟ ಸಮಿತಿ ಅಧ್ಯಕ್ಷ ಎಚ್. ಭಾಸ್ಕರ ಜೋಯಿಸ್, ಶೀಘ್ರವಾಗಿ ಹೆಬ್ರಿ ತಾಲ್ಲೂಕು ಘೋಷಣೆ ಮಾಡುವಂತೆ ಒತ್ತಾಯಿಸಿದರು. ಸಭೆಯಲ್ಲಿ ಸಮಿತಿ ಸಂಚಾಲಕ ನೀರೆ ಕೃಷ್ಣ ಶೆಟ್ಟಿ, ತಾಲ್ಲೂಕು ರಚನೆಯ ಪೂರಕ ಅಂಶ ವಿವರಿಸಿದರು.
ಸಭೆಯಲ್ಲಿ ಎಪಿಎಂಸಿ ಸದಸ್ಯರಾದ ಮುಟ್ಲಪಾಡಿ ಸತೀಶ್ ಶೆಟ್ಟಿ, ಸಂಜೀವ ನಾಯ್ಕ್, ಎಸ್.ಆರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್. ನಾಗರಾಜ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ಅಮೃತ ಕುಮಾರ್ ಶೆಟ್ಟಿ, ಪಂಚಾಯಿತಿ ಅಧ್ಯಕ್ಷರಾದ ಚಾರದ ಸಂದೀಪ್, ಜಲಜ ಪೂಜಾರಿ ನಾಡ್ಪಾಲು, ಕಳ್ತೂರು-ಸಂತೆಕಟ್ಟೆಯ ವಿಮಲಾ, ಉದ್ಯಮಿ ಹೆಬ್ರಿ ಸತೀಶ್ ಪೈ, ಜಯ ಕರ್ನಾಟಕ ಸಂಘಟನೆಯ ವಿಜಯ ಹೆಗ್ಡೆ, ವಿವಿಧ ಸಂಘಟನೆ ಮುಖಂಡರು ಹಾಜರಿದ್ದರು.
ಗ್ರಾಮಸ್ಥರ ಪರವಾಗಿ ರಾಜೀವ ಶೆಟ್ಟಿ, ಎಚ್.ಕೆ.ಶ್ರೀಧರ ಶೆಟ್ಟಿ, ಸಂಜೀವ ನಾಯ್ಕ ಹೆಬ್ರಿ ತಾಲ್ಲೂಕು ರಚಿಸುವಂತೆ ಒತ್ತಾಯಿಸಿದರು. ಟಿ.ಜಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿ, ನವೀನ್ ಅಡ್ಯಂತಾಯ ವಂದಿಸಿದರು.