ಹಾಸನ: ‘ಗಣರಾಜ್ಯ ಉಳಿಸಿ, ಜನರಾಜ್ಯ ಬೆಳೆಸಿ’ ಎಂದು ಆಗ್ರಹಿಸಿ ಸಿಪಿಎಂ ಕಾರ್ಯಕರ್ತರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ದೇಶದಲ್ಲಿ ಸಂವಿಧಾನ ಜಾರಿಗೆ ಬಂದು ಏಳು ದಶಕ ಗತಿಸಿದರೂ ಸ್ವಾವಲಂಬನೆ ಜೀವನ ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರವು ಕೋಮು ಸಂಘರ್ಷಕ್ಕೆ ಎಡೆಮಾಡಿಕೊಡುತ್ತಿದೆ. ಧಾರ್ಮಿಕ ಪದ್ಧತಿಯ ಹೆಸರಿನಲ್ಲಿ ಕಲಹಕ್ಕೆ ಮುನ್ನುಡಿ ಬರೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಗೋ ರಕ್ಷಣೆ, ಭಯೋತ್ಪಾದನೆ ಮತ್ತು ಇತರೆ ಹಲವು ನೆಪಗಳನ್ನು ಮುಂದೊಡ್ಡಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಸಲಾಗುತ್ತಿದೆ. ದಲಿತರ ಮೇಲೂ ದಾಳಿ ನಡೆಯುತ್ತಿವೆ. ಕೇಂದ್ರ ಸರ್ಕಾರದ ದುರಾಡಳಿತ ವಿರುದ್ಧ ಪ್ರಶ್ನಿಸಿದ ಕ್ರಾಂತಿಕಾರಿಗಳನ್ನು ಕೊಲ್ಲುವ ಕುತಂತ್ರ ನಡೆಯುತ್ತಿದೆ.
ರೋಹಿತ್ ವೆಮೂಲ, ಎಂ.ಎಂ. ಕಲ್ಬುರ್ಗಿ ಹೀಗೆ ಅನೇಕರ ಬಲಿ ತೆಗೆದುಕೊಂಡರು. ಇದೇ ಪರಿಸ್ಥಿತಿ ಮುಂದುವರೆದರೆ ದೇಶದಲ್ಲಿ ಸಾಮಾನ್ಯ ಜನರು ಬದುಕುವ ಪರಿಸ್ಥಿತಿ ಕಠಿಣವಾಗಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗರಿಷ್ಠ ಮೌಲ್ಯದ ನೋಟುಗಳ ರದ್ದು ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ನೂರಾರು ಜನರ ಸಾವಿಗೆ ಕಾರಣರಾದರು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಭ್ರಷ್ಟಾಚಾರದ ಮೂಲ ಪ್ರಧಾನಿಗೆ ಗೊತ್ತಿದ್ದರೂ ಪ್ರಾಮಾಣಿಕ ದುಡಿಮೆದಾರರನ್ನು ಭ್ರಷ್ಟರೆಂಬಂತೆ ಪರಿಗಣಿಸಿದರು. ₹ 2 ಸಾವಿರ ಮುಖಬೆಲೆಯ ನೋಟು ನಿಗದಿತ ಸಮಯಕ್ಕೆ ಸಿಗದೆ ಜೀವನಕ್ಕೂ ತೊಂದರೆ ಆಗುತ್ತಿದೆ. ವಿದೇಶದಲ್ಲಿರುವ ಕಪ್ಪುಹಣವನ್ನು ವಾಪಸ್ ತರುವ ಬದಲು ದೇಶದೊಳಗಿನ ಹಣ ಒಟ್ಟುಗೂಡಿಸಿ ತಮ್ಮ ಕಾರ್ಯ ಸಾಧಿಸಿಕೊಂಡರು ಎಂದು ಟೀಕಿಸಿದರು.
ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದು, ಶತಾಯಗತಾಯ ತಮ್ಮ ಪಕ್ಷವನ್ನು ಗೆಲ್ಲಿಸಬೇಕು ಎಂಬ ಮಹದಾಸೆಯಿಂದ ಇಲ್ಲ ಸಲ್ಲದ ಭರವಸೆಗಳನ್ನು ಸಾರ್ವಜನಿಕರಿಗೆ ನೀಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಜೆಟ್ ಮಂಡಿಸಬಾರದು ಎಂಬ ಕಾನೂನು ಇದ್ದರೂ ಅದನ್ನು ಧಿಕ್ಕರಿಸಿ ಫೆ. 1ಕ್ಕೆ ಬಜೆಟ್ ಮಂಡಿಸಲು ಕೇಂದ್ರ ನಿರ್ಧರಿಸಿದೆ ಎಂದು ಆರೋಪಿಸಿದರು.
ಸಿಪಿಎಂ ಜಿಲ್ಲಾ ಘಟಕ ಅಧ್ಯಕ್ಷ ಧರ್ಮೇಶ್, ಎಂ.ಜಿ. ಪೃಥ್ವಿ, ಕೆಪಿಆರ್ಎಸ್ ಜಿಲ್ಲಾ ಕಾರ್ಯದರ್ಶಿ ವಸಂತ್ ಕುಮಾರ್, ಎಚ್.ಆರ್. ನವೀನ್ಕುಮಾರ್, ಮರಿ ಜೋಸೆಫ್ ಇದ್ದರು.