ಹಾಸನ: ಸಾಕ್ಷರ ಜನರೇ ಮತದಾನ ಮಾಡುವಲ್ಲಿ ಹಿಂದೆ ಸರಿಯುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಚ್ಯುತಿ ಬಂದಂತಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷೆನ್ಸ್ ನ್ಯಾಯಾಧೀಶ ಕೃಷ್ಣಮೂರ್ತಿ ಬಿ. ಸಂಗಣ್ಣನವರ್ ಬೇಸರ ವ್ಯಕ್ತಪಡಿಸಿದರು.
ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ವತಿಯಿಂದ ಇತ್ತೀಚೆಗೆ ನಡೆದ ಕಾನೂನು ಅರಿವು- ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
18 ವರ್ಷ ತುಂಬಿದ ಎಲ್ಲರೂ ಮತದಾನಕ್ಕೆ ಅರ್ಹರಾಗಿರುತ್ತಾರೆ. ಯುವ ಪೀಳಿಗೆ ಮತದಾನದ ಮಹತ್ವ ಅರಿತು ಆ ಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೆ.ವಿ. ವಿಜಯಾನಂದ ಮಾತನಾಡಿ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದರಿಂದ ನಿಮ್ಮನ್ನು ನೀವು ಚಲಾಯಿಸಿದಂತಾಗುತ್ತದೆ. ಮುಂದಿನ ದಿನಗಳಲ್ಲಿ ನೀವು ಸಹ ಚುನಾವಣೆಗಳಲ್ಲಿ ಪಾಲ್ಗೊಳ್ಳುವವರಿದ್ದು, ಈಗಿನಿಂದಲೇ ನಿಮಗಿರುವ ಹಕ್ಕು ಬಾಧ್ಯತೆಗಳನ್ನು ತಿಳಿದುಕೊಳ್ಳಬೇಕು. ಅಭ್ಯಾಸದ ಕಡೆಗೆ ಹೆಚ್ಚು ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ಲಕ್ಷ್ಮೀನಾರಾಯಣ್ ಮಾತನಾಡಿ, ಪಠ್ಯಪುಸ್ತಕ ಅಧ್ಯಯನ ಜತೆಗೆ ಸಂವಿಧಾನ ಅರಿಯಲು ವಿದ್ಯಾರ್ಥಿಗಳು ಉತ್ಸುಕತೆ ತೋರಬೇಕು. ತಾವು ಮತದಾನ ಮಾಡುವ ಮೂಲಕ ಕುಟುಂಬ ಸದಸ್ಯರಿಗೂ ಅದರ ಮಾಹಿತಿ ನೀಡಬೇಕು. ಸಂವಿಧಾನದಲ್ಲಿ ಹಲವಾರು ಬಲಿಷ್ಠ ಕಾನೂನುಗಳಿವೆ. ಆದರೆ ಅದರಲ್ಲಿ ಕೆಲವು ಬರಹಕ್ಕೆ ಮಾತ್ರ ಸೀಮಿತವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಪಿ.ಆರ್. ಶಾಂತ ಮಾತನಾಡಿದರು. ಅರ್ಥಶಾಸ್ತ್ರ ವಿಭಾಗ ಮುಖ್ಯಸ್ಥ ಕೆ.ಡಿ. ಮುರುಳೀಧರ್, ಎಚ್.ಎ. ಪದ್ಮಿನಿ, ಯಾಸ್ಮಿನ್ ಭಾನು, ಅಧೀಕ್ಷಕ ಎಚ್.ಎಂ. ಕಿರಣ್, ಪಲ್ಲವಿ, ಸಂಜೀವ್ ಕುಮಾರ್, ಕಾವ್ಯ ಸಿ.ಎನ್ ಇದ್ದರು.