ಬೀದರ್: ಜಿಲ್ಲೆಯಲ್ಲಿರುವ ಜೀತದಾಳುಗಳನ್ನು ವಿಮುಕ್ತಗೊಳಿಸಿ ಅವರಿಗೆ ‘ಜೀತ ವಿಮುಕ್ತಿ ದೃಢೀಕರಣ ಪತ್ರ’ ನೀಡಬೇಕು ಎಂದು ಆಗ್ರಹಿಸಿ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆ ನೇತೃತ್ವದಲ್ಲಿ ಜೀತದಾಳುಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಹುಮನಾಬಾದ್ ತಾಲ್ಲೂಕಿನ ಚಂದನಹಳ್ಳಿಯ 22 ಜೀತದಾಳುಗಳು 2016ರ ಫೆಬ್ರುವರಿ 28ರಂದು ಹುಮನಾಬಾದ್ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಅವರಿಗೆ ‘ಜೀತ ವಿಮುಕ್ತಿ ದೃಢೀಕರಣ ಪತ್ರ’ ಕೊಡಬೇಕು ಎಂದು ಆಗ್ರಹಿಸಿದರು.
ಹುಮನಾಬಾದ್ ತಾಲ್ಲೂಕಿನ ಚಂದನಹಳ್ಳಿಯಲ್ಲಿ ತಂದೆ ಪಡೆದ ಸಾಲ ತೀರಿಸಲು ಯುವಕರೊಬ್ಬರು ಜಮೀನ್ದಾರರ ಬಳಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರೇತರ ಸಂಘಟನೆ ಸಮೀಕ್ಷೆ ನಡೆಸಿ ಜಿಲ್ಲಾ ಆಡಳಿತಕ್ಕೆ ವರದಿ ಸಲ್ಲಿಸಿದರೂ ಕಂದಾಯ ಇಲಾಖೆ ಅಧಿಕಾರಿಗಳು ಜೀತದಾಳುಗಳನ್ನು ಭೇಟಿಯಾಗುವ ಬದಲು ಮಾಲೀಕರನ್ನು ಭೇಟಿಯಾಗಿ ಬರುತ್ತಿದ್ದಾರೆ ಎಂದು ಆರೋಪಿಸಿದರು.
ಹುಮನಾಬಾದ್ ತಾಲ್ಲೂಕಿನ ಗ್ರಾಮ ಲೆಕ್ಕಾಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ತಮ್ಮ ಸಹಾಯಕರ ಮೂಲಕ ಬಿಳಿ ಹಾಳೆಯಲ್ಲಿ ಜೀತದಾಳುಗಳಿಂದ ಸಹಿ ಪಡೆದು ನಂತರ ಜೀತವಿಲ್ಲವೆಂದು ಬರೆದು ಜಿಲ್ಲಾ ಆಡಳಿತಕ್ಕೆ ಸುಳ್ಳು ವರದಿ ಸಲ್ಲಿಸಿದ್ದಾರೆ.
ಸುಳ್ಳು ವರದಿ ನೀಡಿರುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪಂಗಡದ ದೌರ್ಜನ್ಯ ಕಾಯ್ದೆಯಡಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದ ಜಾಗೃತ ಸಮಿತಿಗಳ ಸಭೆಗಳನ್ನು ಕಡ್ಡಾಯವಾಗಿ ಎರಡು ತಿಂಗಳಿಗೊಮ್ಮೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೀತ ವಿಮುಕ್ತಿ ಕರ್ನಾಟಕ (ಜೀವಿಕ) ಸಂಘಟನೆಯ ಜಿಲ್ಲಾ ಸಂಚಾಲಕಿ ಇಂದುಮತಿ ಸಾಗರ, ಬಹುಜನ ಜಾಗೃತಿ ವೇದಿಕೆ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಮೊಳಕೆರೆ, ಬುದ್ಧ, ಬಸವ ಹಾಗೂ ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಮಹೇಶ ಗೋರನಾಳಕರ್, ಅಮರ ಸಾಗರ, ಜಾನ್ಕೆನಡಿ, ಪ್ರಭು ವಾಘ್ ಪಾಲ್ಗೊಂಡಿದ್ದರು.