ಕೊಪ್ಪಳ: ದಾನಗಳಲ್ಲಿ ಅಕ್ಷರ ದಾನವು ಶ್ರೇಷ್ಠವಾಗಿದ್ದು, ಪ್ರತಿಯೊಬ್ಬ ಶಿಕ್ಷಕರು ತಾವು ಹೇಳುವ ಪಾಠವನ್ನು ವಿದ್ಯಾರ್ಥಿಗಳ ಮನ ಮುಟ್ಟುವಂತೆ ಬೋಧಿಸಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ನಗರದಲ್ಲಿ ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಆಂಗ್ಲ ಭಾಷಾ ಶಿಕ್ಷಕರ ವೇದಿಕೆಯ ಆಶ್ರಯದಲ್ಲಿ ಶುಕ್ರವಾರ ‘ಇಂಗ್ಲಿಷ್ ಮೇಡ್ ಈಸಿ’ ಎಂಬ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೇವಲ 45 ನಿಮಿಷ ಅವಧಿಯಲ್ಲಿ ತಮ್ಮ ತರಗತಿ ಮುಗಿಸಿ ಹೋಗುವುದು ಶಿಕ್ಷಕರಿಗೆ ಶೋಭೆಯಲ್ಲ. ಶಿಕ್ಷಣ ಕ್ಷೇತ್ರವು ಅಭಿವೃದ್ಧಿ ಹೊಂದಲು ಪ್ರತಿಯೊಬ್ಬ ಶಿಕ್ಷಕರು ಪ್ರಾಮಾಣಿಕವಾಗಿ ಮನ ಪೂರ್ವಕವಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು. ತಮಗೆ ಸಿಗುವ ಸೌಕರ್ಯಗಳ ಋಣ ತೀರಿಸಬೇಕಾದರೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ ಬೋಧನೆ ಜೊತೆಗೆ ಆತ್ಮಸ್ಥೈರ್ಯ ತುಂಬಿ ಪರೀಕ್ಷೆಗಳನ್ನು ಎದುರಿಸುವಂತೆ ಮಾಡಬೇಕು. ಜಿಲ್ಲೆಯ ಫಲಿತಾಂಶ ವೃದ್ಧಿಸಬೇಕು ಎಂದರು.
ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಕರಿಯಪ್ಪ ಮೇಟಿ, ನಗರಸಭೆ ಸದಸ್ಯ ಖಾಜಾವಲಿ ಬನ್ನಿಕೊಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ, ಉದ್ಯಮಿ ಶ್ರೀನಿವಾಸ ಗುಪ್ತಾ, ಗುರುರಾಜ ಹಲಗೇರಿ, ಆಂಗ್ಲ ಭಾಷಾ ಪರಿವೀಕ್ಷಕರಾದ ನವಾಜ್ ಖಾನಂ, ನಾಗರಾಜ ಜುಮ್ಮನ್ನವರ, ಸಿದ್ದಪ್ಪ ಎಂ. ಗೋಡಿ, ವೆಂಕಟೇಶಗೌಡ್ರ, ಮಾರ್ತಾಂಡರಾವ್ ದೇಸಾಯಿ, ಶಿವಪ್ಪ ತೊಗರಿ, ಅಶೋಕ ಕುಲಕರ್ಣಿ, ಗವಿಸಿದ್ದಪ್ಪ ಕೊಪ್ಪಳ, ಮಂಜುನಾಥ ಅಬ್ಬಿಗೇರಿ, ನಾಗರಾಜ ಕುಷ್ಟಗಿ, ವಕ್ತಾರ ಅಕ್ಬರ್ ಪಾಷಾ ಪಲ್ಟನ್ ಭಾಗವಹಿಸಿದ್ದರು.