ಬೈಲಹೊಂಗಲ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೃಷಿಮೇಳ ಸ್ವಾಗತ ಸಮಿತಿ ಆಶ್ರಯದಲ್ಲಿ ಮೊದಲ ಬಾರಿಗೆ ನಡೆದ ಶ್ವಾನ ಮತ್ತು ಟಗರು ಪ್ರದರ್ಶನ ಶುಕ್ರವಾರ ಜನಮನ ಸೂರೆಗೊಂಡಿತು. ರಾಜ್ಯ ಮಟ್ಟದ 37ನೇ ಕೃಷಿಮೇಳ ದಲ್ಲಿ ನಡೆದ ಪ್ರದರ್ಶನಕ್ಕೆ ರಾಜ್ಯ, ಜಿಲ್ಲೆಗಳಿಂದ ಮಾಲಿಕರು ತಮ್ಮ ಮುದ್ದಾದ ನಾಯಿಗಳನ್ನು ಪ್ರದರ್ಶಿಸಿದರು.
ಗೋಲ್ಡನ್ ರಿಟ್ರಿವರ್, ರಾಕ್ವೆಲ್ಲರ್, ಬೋಲ್ಡ್ ಎಟ್ವಿರಿ, ಲ್ಯಾಬ್ (ಪೊಲೀಸ್ ತನಿಖೆಯಲ್ಲಿ ಹೆಚ್ಚಾಗಿ ಬಳಸುವ ಚಾಣಾಕ್ಷ ಶ್ವಾನ ದಳ), ಡೈಮಂಡ್, ಲಾಬ್ರಡಾರ್, ಜರ್ಮನ್ ಶೆಫರ್ಡ್, ದೇಶಿಯ ತಳಿ ಮತ್ತು ಈ ಭಾಗದಲ್ಲಿ ಹೆಚ್ಚಾಗಿ ಸಾಕುವ ಮುಧೋಳ ನಾಯಿ ಸೇರಿದಂತೆ ೧೫ಕ್ಕೂ ಹೆಚ್ಚು ವಿವಿಧ ತಳಿಯ ನಾಯಿಗಳ ಪ್ರದರ್ಶನ ನಡೆಯಿತು.
ಪೊಲೀಸ್ ಶ್ವಾನಗಳ ಕಾರ್ಯ, ಅವುಗಳ ಚಾಕಚಕ್ಯತೆ, ಅಪರಾಧಿಗಳನ್ನು ಪತ್ತೆ ಮಾಡುವ ವಿಧಾನ ಕುರಿತು ಹಲವಾರು ಪಾತ್ಯಕ್ಷಿಕೆಗಳನ್ನು ಪರಿಚಯಿಸಿದರು. ಗಾಂಜಾ ಇಟ್ಟುಕೊಂಡು ಸಾಗುವವ ರನ್ನು ಹೇಗೆ ತಪಾಸಣೆ ಮಾಡಲಾಗುತ್ತದೆ, ಕೊಲೆ ಆರೋಪಿಯನ್ನು ಪತ್ತೆ ಮಾಡುವ ಬಗೆ, ಹೀಗೆ ಹಲವು ತನಿಖೆಗಳ ಮಾದರಿ ಗಳನ್ನು ತೋರ್ಪಡಿಸುವ ಮೂಲಕ ಸಾರ್ವಜನಿಕರಿಗೆ ಪೊಲೀಸ್ ಇಲಾಖೆ ತನ್ನ ಕಾರ್ಯನಿರ್ವಹಣೆಯ ಸವಾಲುಗಳನ್ನು ಸಾಮಾನ್ಯರಿಗೆ ಪರಿಚಯಿಸಿದರು.
ಶ್ವಾನಪ್ರಿಯರು ಅಲ್ಲಲ್ಲಿ ವಿವಿಧ ತಳಿಯ ನಾಯಿಗಳು, ಆಹಾರ ಪದ್ಧತಿ, ಜೀವನ ಕ್ರಮ ಮತ್ತು ಅವುಗಳ ಆರೈಕೆಯ ಬಗೆಗಳ ಮಾಹಿತಿ ಪಡೆದರಲ್ಲದೇ ಅಲ್ಲಲ್ಲಿ ಮಾರಾಟಕ್ಕೆ ನಾಯಿ ಕೊಡ್ತೀರಾ ಎಂದು ಪ್ರಶ್ನಿಸುವ ಮೂಲಕ ನೆಚ್ಚಿನ ನಾಯಿಗಳ ಕುರಿತು ಮಾಹಿತಿ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದರು.
ಶ್ವಾನಗಳ ಮಾಲಿಕರು ಮಾಡುತ್ತಿದ್ದ ಕಸರತ್ತುಗಳನ್ನು ನೋಡಿ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿ ದರು. ನಾಯಿಗಳಿಗೆ ಕೆಲವು ಮಾಲೀಕರು ವಾಕ್ ಮಾಡಿಸಿದರು. ಇದರಿಂದ ಸಂತಸಗೊಂಡ ಪ್ರೇಕ್ಷಕರು ಜೋರಾದ ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ನಡೆದ ಶ್ವಾನ ಮತ್ತು ಟಗುರು ಪ್ರದರ್ಶನ ಸಂಘಟಕರ ಪರಿಶ್ರಮದಿಂದ ಚೆನ್ನಾಗಿ ಮೂಡಿ ಬಂದಿತು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ನಿಯತ್ತಿಗೆ ಮತ್ತೊಂದು ಹೆಸರೇ ಶ್ವಾನ. ತನ್ನ ಮಾಲೀಕನಿಗೆ ನಿಷ್ಠೆಯನ್ನು ತೋರುವ ಜೊತೆಗೆ ಎಲ್ಲಾ ರೀತಿಯಲ್ಲಿ ಆತನಿಗೆ ಒಳ್ಳೆಯದು ಮಾಡುತ್ತದೆ. ಅದಕ್ಕೆ ವೆಚ್ಚ ಮಾಡುವ ಹಣ ಮಾತ್ರ ತಿಳಿಯುತ್ತದೆ. ಅದರಿಂದ ಆಗುವ ಉಪಯೋಗಕ್ಕೆ ಬೆಲೆ ಕಟ್ಟಲಾಗದು ಎಂದರು. ಡಾ.ವಿ.ಎಸ್. ಸಾಧುನವರ, ಡಾ.ಬಿ.ಎಂ. ಗೋಮಾಡೆ, ಕೆಎಂಎಫ್ ನಿರ್ದೇಶಕ ಈಶ್ವರ ಉಳ್ಳೇಗಡ್ಡಿ ಇದ್ದರು. ಪಿ.ಎನ್. ನಾಗರಾಜ ಪ್ರದರ್ಶನ ಸಂಘಟಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.